ರೈಲು ಹಳಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ
ಸಾಗರ, ಮಾ.3: ಇಲ್ಲಿನ ಗೋಪಾಲಗೌಡ ಕ್ರೀಡಾಂಗಣ ಬಳಿ ರಾಘವೇಂದ್ರ ರಾಯ್ಕರ್ (36) ಎಂಬ ಯುವಕನೋರ್ವ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆಗಿದೆ.
ನಗರದ ಅಶೋಕ ರಸ್ತೆಯ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಪಕ್ಕ ಚಿನ್ನ-ಬೆಳ್ಳಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಗುರುವಾರ ಸಂಜೆ 7:30ರ ಸುಮಾರಿಗೆ ಗಂಗಾ ಪರಮೇಶ್ವರಿ ರಸ್ತೆಯಲ್ಲಿರುವ ತಮ್ಮ ಮನೆಯಿಂದ ಮೊಬೈಲ್ ಸಹ ಬಿಟ್ಟು ಹೋಗಿದ್ದನು. ರಾತ್ರಿ ರಾಘವೇಂದ್ರ ಮನೆಗೆ ಬರದೆ ಇರುವುದರಿಂದ ಗಾಬರಿಗೊಂಡ ಮನೆಯವರು ಹುಡುಕಲು ಹೊರಟಿದ್ದಾರೆ.
ಈ ಸಂದರ್ಭದಲ್ಲಿ ರೈಲು ಹಳಿಗೆ ಯುವಕನೊಬ್ಬ ತಲೆಕೊಟ್ಟು ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಮೃತಪಟ್ಟ ಯುವಕ ರಾಘವೇಂದ್ರ ಎಂದು ತಿಳಿದು ಬಂದಿದೆ. ಕೆಲವು ವರ್ಷಗಳಿಂದ ರಾಘವೇಂದ್ರನಿಗೆ ತಲೆ ಸುತ್ತುವಿಕೆ ಸೇರಿದಂತೆ ಸಣ್ಣಪುಟ್ಟ ಕಾಯಿಲೆ ಇತ್ತು.ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.