ಇಸಿಎಚ್ಎಸ್ನಲ್ಲಿ ಟೆಲಿಮೆಡಿಸನ್ ಸೇವೆಗೆ ಚಾಲನೆ
ಮಡಿಕೇರಿ, ಎ.9: ಭಾರತೀಯ ಭೂಸೇನೆಯ ದಕ್ಷಿಣ ವಲಯದ ಮುಖ್ಯಸ್ಥರಾದ ಲೆ.ಜ.ಪಟ್ಟಾರೈಮುಲ್ ಮುಹಮ್ಮದಾಲಿ ಹರೀಜ್ ಪಿವಿಎಸ್ ಎಂ., ಎ.ವಿ.ಎಸ್.ಎಂ., ಎಸ್.ಎಂ, ವಿಎಸ್ ಎಂ ಅವರು ಮಡಿಕೇರಿಗೆ ಭೇಟಿ ನೀಡಿ ಜನರಲ್ ತಿಮ್ಮಯ್ಯ ಅವರ ಸ್ಮಾರಕ ನಿರ್ಮಾಣದ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.
ಈ ಸಂದರ್ಭ ಫೀ.ಮಾ.ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಫೋರಂನ ಪದಾಧಿಕಾರಿಗಳು ಹಾಜರಿದ್ದು, ಸ್ಮಾರಕ ನಿರ್ಮಾಣದ ಯೋಜನೆಗೆ ಸಹಕಾರ ಕೋರಿದರು. ಲೆ.ಜ.ಹರೀಜ್ ಅವರು ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದರು. ನಗರದಲ್ಲಿರುವ ಫೀ.ಮಾ.ಕಾರ್ಯಪ್ಪ ಹಾಗೂ ಜ.ತಿಮ್ಮಯ್ಯ ಅವರುಗಳ ಪ್ರತಿಮೆಗಳನ್ನು ವೀಕ್ಷಿಸಿ ಗೌರವ ಸಲ್ಲಿಸಿದರು.
ನಂತರ ನಗರದಲ್ಲಿರುವ ಇಸಿಹೆಚ್ಎಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಟೆಲಿಮೆಡಿಸಿನ್ ಸೇವೆಗೆ ಚಾಲನೆ ನೀಡಿದರು. ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ಸಂಚಾಲಕ ಮೇಜರ್ ಬಿ.ಎ.ನಂಜಪ್ಪ, ಸೇನಾಧಿಕಾರಿಗಳಾದ ಲೆ.ಜ. ಆರ್.ಕೆ.ಆನಂದ್, ಬ್ರಿಗೇಡಿಯರ್ ಸಲೀಂ ಹಾಗೂ ಸೇನಾಧಿಕಾರಿಗಳು ಉಪಸ್ಥಿತರಿದ್ದರು.