ಓರಿಸ್ಸಾ ಮೂಲದ 44 ಜನ ಜೀತದಾಳುಗಳ ರಕ್ಷಣೆ
ಮಾಲೂರು, ಎ.20: ಖಾಸಗಿ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತಾದಾಳುಗಳಾಗಿ ಕೆಲಸ ಮಾಡುತ್ತಿದ್ದ 44 ಮಂದಿಯನ್ನು ಎಸಿ ಮಂಜುನಾಥ ಅವರ ನೇತೃತ್ವದಲ್ಲಿ ರಕ್ಷಣೆ ಮಾಡಲಾಗಿದೆ.
ತಾಲೂಕಿನ ಲಕ್ಕೂರು ಹೋಬಳಿಯ ಖಾಸಗಿ ಇಟ್ಟಿಗೆ ಕಾರ್ಖಾನೆಯಲ್ಲಿ ಓರಿಸ್ಸಾದ ಬಲಾಂಗೀರ್ ಹಾಗೂ ರಾಯಘಡ ಜಿಲ್ಲೆಗೆ ಸೇರಿದ 44 ಜನರು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದರು. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಕೆಲಸ ಮಾಡುತ್ತಿರುವುದಾಗಿಯೂ ಕಾರ್ಖಾನೆಯವರು ಊರಿಗೆ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಕಾರ್ಮಿಕರು ಓರಿಸ್ಸಾದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಓರಿಸ್ಸಾದ ಮುಖ್ಯ ಕಾರ್ಯದರ್ಶಿಗಳು ರಾಜ್ಯದ ಮುಖ್ಯ ಕಾರ್ಯದಶಿಗೆ ಪತ್ರ ಬರೆದಿದ್ದು, ಇದರಂತೆ ಅವರು ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು.
ಆದೇಶದನ್ವಯ ಎಸಿ ನೇತೃತ್ವದಲ್ಲಿ ದಾಳಿ ನಡೆಸಿ 44 ಜನರನ್ನ ರಕ್ಷಣೆ ಮಾಡಲಾಗಿದ್ದು, ಕಾರ್ಖಾನೆಯ ಮಾಲಕನ ಮೇಲೆ ಕಾನೂನು ಕ್ರಮ ಜರಗಿಸಲು ಜಿಲ್ಲಾಡಳಿತ ಮುಂದಾಗಿದೆ. ದಾಳಿಯಲ್ಲಿ ತಹಶೀಲ್ದಾರ್ ಎಚ್.ವಿ.ಗಿರೀಶ್, ಕಾರ್ಮಿಕಾಧಿಕಾರಿಗಳಾದ ನಿರಂಜನ್, ಲೋಕೇಶ್ ಮತ್ತು ಕಾರ್ಮಿಕ, ಕಂದಾಯ ಅಧಿಕಾರಿಗಳು ಪಾಲ್ಗೊಂಡಿದ್ದರು.