ಚಿನ್ನಾಭರಣ,ನಗದು ಕಳ್ಳತನ
ಶಿವಮೊಗ್ಗ, ಮೇ 22: ಮನೆಯ ಬಾಗಿಲು ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ ಹಾಗೂ ನಗದು ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾಮಾಕ್ಷಿ ಬೀದಿ 2ನೆ ತಿರುವಿನಲ್ಲಿ ರವಿವಾರ ತಡರಾತ್ರಿ ವರದಿಯಾಗಿದೆ. ಹೂವಿನ ವ್ಯಾಪಾರಿ ಗೋಪಮ್ಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ಕುಟುಂಬ ಸದಸ್ಯರು ಧಾರ್ಮಿಕ ಕಾರ್ಯದ ನಿಮಿತ್ತ ಇತ್ತೀಚೆಗೆ ಕಲ್ಹತ್ತಗಿರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು, ಮುಂಬಾಗಿಲು ಬೀಗ ಮುರಿದು ಒಳ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.ಸೋಮವಾರ ಬೆಳಿಗ್ಗೆ ಸುತ್ತಮುತ್ತಲಿನ ನಿವಾಸಿಗಳು ಮನೆಯ ಬೀಗ ಮುರಿದಿರುವುದನ್ನು ಗಮನಿಸಿ ಮನೆಯವರಿಗೆ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಬೀರುವಿನಲ್ಲಿದ್ದ 91 ಗ್ರಾಂ ಚಿನ್ನಾಭರಣ, 8 ಸಾವಿರ ನಗದು ಅಪಹರಿಸಿದ್ದಾರೆ. ಇವುಗಳ ವೌಲ್ಯ 2.58 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದು, ಇನ್ನಷ್ಟ್ಟೇ ಅಧಿಕೃತ ಮಾಹಿತಿಗಳು ಲಭ್ಯವಾಗಬೇಕಾಗಿದೆ.