ಪೊಲೀಸ್ ಪೇದೆಗೆ ಹಲ್ಲೆ: ನಾಲ್ವರ ಬಂಧನ
ಮಡಿಕೇರಿ ಮೇ 22 : ರಾತ್ರಿ ವೇಳೆ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದೆ.
ಪ್ರಕಟಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಠಾಣೆಯ ಸಿಬ್ಬಂದಿ ಸಿದ್ದರಾಮ ಎಂಬವರು ಗೃಹರಕ್ಷಕ ಸಿಬ್ಬಂದಿ ಅರುಣ್ ಎಂಬವರೊಂದಿಗೆ ರಾತ್ರಿ 1 ಗಂಟೆಯ ಸುಮಾರಿಗೆ ಕಕ್ಕೆಹೊಳೆ ಜಂಕ್ಷನ್ ಬಳಿ ಗಸ್ತಿನಲ್ಲಿದ್ದ ಸಂದರ್ಭ ಬೈಕ್ನಲ್ಲಿ ಆಗಮಿಸಿದ ದುಷ್ಕರ್ಮಿಗಳಾದ ತಾಕೇರಿ ಗ್ರಾಮದ ಪುನೀತ್, ಮಾಟ್ನಳ್ಳಿ ಗ್ರಾಮದ ದರ್ಶನ್, ತಾಕೇರಿಯ ಸಂಕೇತ್, ತಲ್ತರೆಶೆಟ್ಟಳ್ಳಿಯ ದರ್ಶನ್, ಅಭಿಮಠ ಬಾಚಳ್ಳಿಯ ಆದರ್ಶ್, ತಾಕೇರಿಯ ಚೇತನ್ ಎಂಬವರು ಪೊಲೀಸ್ ಪೇದೆಯೊಂದಿಗೆ ಜಗಳ ತೆಗೆದು, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಿಬ್ಬಂದಿ ಸಿದ್ದರಾಮ ಅವರು ನೀಡಿದ ದೂರಿನ ಮೇರೆ ಇಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅಭಿಮಠ ಬಾಚಳ್ಳಿಯ ಆದರ್ಶ್ ಹಾಗೂ ತಾಕೇರಿಯ ಚೇತನ್ ತಲೆಮರೆಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.