ಶಿವಮೊಗ್ಗ : ಕಾರಾಗೃಹದಲ್ಲಿದ್ದ ಬಾಂಗ್ಲಾದೇಶದ ಯುವಕ ಪರಾರಿ
ಶಿವಮೊಗ್ಗ, ಮೇ. 22: ದೇಶಕ್ಕೆ ಅನದಿಕೃತವಾಗಿ ಆಗಮಿಸಿದ್ದ ಆರೋಪದ ಮೇರೆಗೆ ಭದ್ರಾವತಿ ಪೊಲೀಸರಿಂದ ಬಂಧಿತನಾಗಿ ಶಿವಮೊಗ್ಗದ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಬಾಂಗ್ಲಾದೇಶದ ಯುವಕ ಜೈಲ್ನಿಂದ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಮೊಹಮದ್ ರೋಹನ್ ಹುಸೇನ್ (25) ಪರಾರಿಯಾದ ಆರೋಪಿ ಎಂದು ಗುರುತಿಸಲಾಗಿದೆ.
ಈತ ಬಾಂಗ್ಲಾದೇಶದ ಮುನಸಿನಗರಿ ಜಿಲ್ಲೆಯ ಬಾರಖಾಲಿ ಗ್ರಾಮದ ನಿವಾಸಿಯಾಗಿದ್ದಾನೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಕಾರಾಗೃಹ ಸಮೀಪದ ತೋಟದಲ್ಲಿ ಕೆಲಸಕ್ಕೆ ಕರೆದೊಯ್ಯುವ ವೇಳೆ ಆರೋಪಿಯು ಮುಖ್ಯ ಗೇಟ್ನಿಂದಲೇ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕಾರಾಗೃಹ ಮೂಲಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲವಾಗಿದೆ. ಈ ನಡುವೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಶೋಧ ಕಾರ್ಯ ಕೈಗೊಂಡಿದ್ದಾರೆ.
ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಬೇಸರಗೊಂಡು ಮನೆ ತೊರೆದಿದ್ದ ಆರೋಪಿಯು ಬಾಂಗ್ಲಾದೇಶದ ಹಲವೆಡೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಇತ್ತೀಚೆಗೆ ಸಮುದ್ರವೊಂದರ ಬಳಿ ನಿಂತಿದ್ದ ಹಡಗನ್ನೇರಿ ಚೆನ್ನೈಗೆ ಆಗಮಿಸಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಆತನನ್ನು ಸಾರ್ವಜನಿಕರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ತದನಂತರ ರೈಲುಗಳ ಮೂಲಕ ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿದ್ದ.
ಇತ್ತೀಚೆಗೆ ಬೆಂಗಳೂರಿನಿಂದ ಶಿವಮೊಗ್ಗದ ರೈಲನ್ನೇರಿದ್ದ. ಭದ್ರಾವತಿ ಪಟ್ಟಣದಲ್ಲಿ ಇಳಿದುಕೊಂಡು ರಾತ್ರಿ ಹಳೇನಗರದ ಬಳಿ ಸುತ್ತಾಡುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಅನುಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬಾಂಗ್ಲಾದೇಶದಿಂದ ಅನದಿಕೃತವಾಗಿ ದೇಶಕ್ಕೆ ಆಗಮಿಸಿರುವುದು ಬೆಳಕಿಗೆ ಬಂದಿತ್ತು.
ಈತನ ವಿರುದ್ದ ವಿದೇಶಿ ಕಾಯ್ದೆ - 1946 ರ ಅನ್ವಯ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ ಸೂಚನೆಯಂತೆ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.
ಹಿರಿಯ ಅಧಿಕಾರಿಗಳು ಭೇಟಿ
ಬಾಂಗ್ಲಾದೇಶದ ವಿಚಾರಣಾಧೀನ ಕೈದಿಯೋರ್ವ ಪರಾರಿಯಾದ ಹಿನ್ನೆಲೆಯಲ್ಲಿ ಸೋಮವಾರ ಶಿವಮೊಗ್ಗ ನಗರದ ಕಾರಾಗೃಹಕ್ಕೆ ಬಂಧೀಖಾನೆಯ ಇಲಾಖೆಯ ಹೆಚ್ಚುವರಿ ಐಜಿಪಿ ವೀರಭದ್ರಸ್ವಾಮಿ ಹಾಗೂ ಉತ್ತರ ವಲಯದ ಐಜಿಪಿ ಟಿ.ಪಿ.ಸ್ವಾಮಿಯವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ ಎಂದು ಬಂಧೀಖಾನೆ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಕಾರಾಗೃಹದ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಿದ ಅಧಿಕಾರಿಗಳು, ಆರೋಪಿ ಪರಾರಿಯಾದ ವೇಳೆ ಕರ್ತವ್ಯದಲ್ಲಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಜೊತೆಗೆ ಕರ್ತವ್ಯಲೋಪ ಎಸಗಿದ ಆರೋಪದ ಮೇರೆಗೆ ಹಲವರ ವಿರುದ್ದ ಶಿಸ್ತುಕ್ರಮಕ್ಕೂ ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಲಾಗಿದೆ.