ಬೈಕ್ ಢಿಕ್ಕಿ: ಪಾದಚಾರಿ ಮೃತ್ಯು
ಚಿಕ್ಕಮಗಳೂರು, ಮೇ 27: ದ್ವಿಚಕ್ರ ವಾಹನ ಸವಾರನ ಅಜಾಗರೂಕತೆಯಿಂದ ಬೈಕ್ ಢಿಕ್ಕಿ ಸಂಭವಿಸಿ ಪಾದಚಾರಿಯೋರ್ವರು ಮೃತಪಟ್ಟಿರುವ ಘಟನೆ ನಗರದ ಎಪಿಎಂಸಿ ರಸ್ತೆಯಲ್ಲಿ ಶನಿವಾರ ನಡೆದಿದೆ.
ಮೃತನನ್ನು ಚಿಕ್ಕ ಬಾಣೂರು ಎಂಬಲ್ಲಿನ ಧನಂಜಯ್(54) ಎಂದು ಗುರುತಿಸಲಾಗಿದೆ. ಈತ ನಗರದ ಎಪಿಎಂಸಿ ಬಳಿ ರಸ್ತೆ ದಾಟುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ವೇಳೆ ಗಂಭೀರ ಗಾಯಗೊಂಡ ಅವರನ್ನು ಮಲ್ಲೇಗೌಡ ಸರಕಾರಿ ಜಿಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಬಳಿಕ ಮಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story