ಸಾಲಬಾಧೆೆ: ರೈತ ಆತ್ಮಹತ್ಯೆ
ಕಡೂರು, ಮೇ 27: ಸಾಲಬಾಧೆೆ ತಾಳಲಾರದೆ ರೈತರೋರ್ವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಚನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಾಥಪುರ ಎಂಬಲ್ಲಿ ಶನಿವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಹಾಲಪ್ಪ(52) ಎಂದು ಗುರುತಿಸಲಾಗಿದೆ. ಈತನಿಗೆ ವಡೇರಹಳ್ಳಿ ಗ್ರಾಮದ ಸ.ನಂ.16/1ಪಿ2 ರಲ್ಲಿ 3.03 ಎಕರೆ ಭೂಮಿ ಇತ್ತು ಎನ್ನಲಾಗಿದ್ದು, ಆ ಜಮೀನಿನಲ್ಲಿ 2 ಎಕರೆ ದಾಳಿಂಬೆ ಮತ್ತು 1.3 ಎಕರೆಯಲ್ಲಿ ತೆಂಗು ಬೆಳೆದಿದ್ದರು. ತೋಟಕ್ಕೆ ತಂತಿ ಬೇಲಿ ಹಾಕಿಸಲು, ಬೋರ್ವೆಲ್ ಕೊರೆಯಿಸಲು ಹಾಗೂ ದಾಳಿಂಬೆ ಬೆಳೆ ಅಭಿವೃದ್ಧಿಗೆ ಬ್ಯಾಂಕು ಮತ್ತು ಕೈಸಾಲ ಮಾಡಿಕೊಂಡಿದ್ದರು.
ಆದರೆ ಕಳೆದ ಸಲ ಮಳೆ ಸಕಾದಲ್ಲಿ ಬಾರದೇ ಬೆಳೆ ಸರಿಯಾಗಿ ಇಳುವರಿ ಕೊಡದ ಹಿನ್ನೆಲೆಯಲ್ಲಿ ಹಾಲಪ್ಪ ತೀವ್ರವಾಗಿ ನೊಂದಿದ್ದರು. ಪಡೆದ ಸಾಲ ಮರಳಿ ತೀರಿಸಲು ಸಾಧ್ಯವಾಗದ ನೋವಿನಿಂದ ಬೇಸತ್ತು ದಾಳಿಂಬೆ ತೋಟಕ್ಕೆ ಸಿಂಪಡಿಸಲು ತಂದಿಟ್ಟಿದ್ದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ತಮ್ಮನ ಮಗ ಪ್ರದೀಪ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.