ಯುವಕನ ಕೈ ಕತ್ತರಿಸಿದ ಪ್ರಕರಣ: ಆರು ಮಂದಿಯ ಬಂಧನ
ಮದ್ದೂರು, ಜು.20: ಪಟ್ಟಣದಲ್ಲಿ ಈಚೆಗೆ ಕ್ಷುಲ್ಲಕ ಕಾರಣಕ್ಕೆ ನಡೆದ ಯುವಕರ ಗುಂಪು ಘರ್ಷಣೆಯಲ್ಲಿ ಯುವಕನೊಬ್ಬನ ಕೈ ಕತ್ತರಿಸಿದ ಪ್ರಕರಣದ ಆರು ಮಂದಿ ಆರೋಪಿಗಳನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ನಿವಾಸಿಗಳಾದ ಸೂರಜ್ಗೌಡ ಆಲಿಯಾಸ್ ಪುಟಾಣಿ, ಅಕ್ಷಯ್ ಆಲಿಯಾಸ್ ವ್ಯಾಸ, ಎಂ.ಆರ್.ರೇವಂತ್ ಆಲಿಯಾಸ್ ರಾಜೇಶ್, ಸಿ.ಎನ್.ಅವಿನಾಶ್ ಆಲಿಯಾಸ್ ಮೆದೆ ಅಭಿ, ಕುಮಾರ್ ಆಲಿಯಾಸ್ ಕುಳ್ಳ ಹಾಗು ಎಂ.ವೇಣುಗೋಪಾಲ್ ಆಲಿಯಾಸ್ ವೇಣು ಬಂಧಿತ ಆರೋಪಿಗಳು.
ಆರೋಪಿಗಳು ಜು.16ರಂದು ಪಟ್ಟಣದ ಕಸ್ತೂರಿ ಬಾ ಶಾಲಾ ಆವರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಘರ್ಷಣೆಯಲ್ಲಿ ಪಟ್ಟಣದ ಮಹದೇವು ಅವರ ಪುತ್ರ ವರುಣ್ಗೌಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಲಗೈ ಕತ್ತರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ನಿಯೋಜಿಸಲಾಗಿತ್ತು. ಆಲೂರು ಬೀರೇಶ್ವರ ದೇಗುಲದ ಬಳಿ ಆರೋಪಿಗಳನ್ನು ಬಂಧಿಸಿ, ಅವರಿಂದ ಮಾರುತಿ ವ್ಯಾನು, ಮೂರು ಮಚ್ಚುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಲಾಗಿದೆ.