ಸಂಸ್ಕಾರಯುತ ಶಿಕ್ಷಣ ಪಡೆಯಲು ಮುಂದಾಗಿ: ಅಬ್ದುಲ್ ಖಾದರ್
ಮಾಲೂರು, ಜು.29: ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ರ್ಯಾಗಿಂಗ್ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ವಿದ್ಯಾರ್ಥಿಗಳು ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣವನ್ನು ಪಡೆದು ದೇಶ ಕಟ್ಟುವ ಕೆಲಸ ಮಾಡುವಂತೆ ಪ್ರಧಾನ ಸಿವಿಲ್ ನ್ಯಾಯಾದೀಶರಾದ ಅಬ್ದುಲ್ ಖಾದರ್ ಹೇಳಿದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾ.ಪಂ. ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ನಿರ್ಮಾಣದಲ್ಲಿ ಯುವ ಸಮೂಹದ ಜವಾಬ್ದಾರಿಗಳು ಮತ್ತು ಛೇಡಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ, ಭಯೋತ್ಪಾದನೆ, ರ್ಯಾಗಿಂಗ್ ದೇಶದ ಅಭಿವೃದ್ಧಿಗೆ ಮಾರಕವಾಗಿವೆ. ಮಾಧಕ ವಸ್ತುಗಳು, ಮಧ್ಯಸೇವನೆಯಿಂದ ಯುವ ಸಮೂಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಭ್ರಷ್ಟಚಾರ ರಹಿತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು. ರ್ಯಾಗಿಂಗ್ ಇದೊಂದು ಸಾಮಾಜಿಕ ಪಿಡುಗಾಗಿದೆ. ಕೆಲವು ಶಾಲಾ ಕಾಲೇಜುಗಳಲ್ಲಿ ಇದರ ಚಾಯೆ ಆವರಿಸಿದ್ದು, ಇದೊಂದು ಅಪರಾದ ಚಟುವಟಿಕೆಯಾಗಿದೆ ಎಂದರು.
ಪ್ರಜಾಪ್ರಭುತ್ವ ಸಫಲತೆ, ಅಭಿವೃದ್ಧಿ ಕುಂಠೀತಕ್ಕೆ ಭ್ರಷ್ಟಾಚಾರ ಕಾರಣವಾಗಿದೆ. ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ದ ಸಿಡಿದೆದ್ದು ನಿಲ್ಲಬೇಕು. ವಿವಿಧ ದುಷ್ಚಟಗಳಿಂದ ದೂರವಿದ್ದು, ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣ ಪಡೆದು ಕುಟುಂಬ ನಿರ್ವಹಣೆ ಹಾಗೂ ದೇಶ ಕಟ್ಟುವ ಕೆಲಸ ಮಾಡುವ ಮುಖಾಂತರ ಯುವ ಸಮೂಹ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಕೇಶವರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಕಾರ್ಯದರ್ಶಿ ಸಿ.ಅಶ್ವಥನಾರಾಯಾಣ ಇತರರು ಇದ್ದರು.