ಸದ್ದು ಗದ್ದಲವಿಲ್ಲದೆ ಗಡಿ ಜಿಲ್ಲೆಯಲ್ಲಿ ಕೇಂದ್ರ ಪರಿಸರ ಸಚಿವರ ಪ್ರವಾಸ
ಚಾಮರಾಜನಗರ, ಆ. 19: ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಇದೇ ಮೊದಲ ಭಾರಿಗೆ ಸದ್ದು ಗದ್ದಲವಿಲ್ಲದೇ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಕೆ.ಗುಡಿಯಲ್ಲಿರುವ ಜಂಗಲ್ ಲಾಡ್ಜ್ನಲ್ಲಿ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತೊಯ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪರಿಸರ ಸಚಿವ ಹರ್ಷವರ್ಧನ್, ಗಡಿ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನಾಥ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಈ ಪ್ರದೇಶದಲ್ಲಿ ತಾವು ಕುಟುಂಬ ಸಮೇತವಾಗಿ ಸಂಚರಿಸಿ, ಪ್ರಾಕೃತಿಯ ಸೌಂದರ್ಯವನ್ನು ಸವಿದಿದ್ದು, ಇದು ತಮ್ಮ ಮೊದಲ ಬೇಟಿಯಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿನ ಅರಣ್ಯ ಪ್ರದೇಶ ಸುಂದರವಾಗಿದೆ ಎಂದು ಹೇಳಿದರು.
ಅರಣ್ಯ ಪ್ರದೇಶದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳ ಬಗ್ಗೆ ಪರಿಸರ ಇಲಾಖೆಯಿಂದ ಸಮಸ್ಯೆಗಳಿರುವ ಬಗ್ಗೆ ಚರ್ಚೆ ನಡೆಸಲಾಯಿತು. ಕೇಂದ್ರ ಸರ್ಕಾರವು ಕಾಡಂಚಿನಲ್ಲಿರುವ ಆದಿವಾಸಿಗಳಿಗೆ ಅನುಕೂಲವಾಗುವ ಹಾಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದ್ಬಳಿಕೆಯಾಗಬೇಕೆಂದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಆದಿವಾಸಿಗಳ ನಡುವೆ ಉತ್ತಮ ಬಾಂಧವ್ಯ ಇದ್ದಲ್ಲಿ ಮಾತ್ರ ಪರಿಸರವನ್ನು ಉತ್ತಮವಾಗಿ ಬೆಳಸಲು ಸಾಧ್ಯವಾಗಿದೆ ಎಂದು ಹೇಳಿದ ಸಚಿವರು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಲಾಂಟಾನ ಮತ್ತು ಪಾರ್ಥೇನಿಯಂ ಗಿಡಗಳು ಅಧಿಕವಾಗಿ ಬೆಳೆಯುತ್ತಿದ್ದು ಇದರಿಂದ ಕಾಡಿನ ಇನ್ನಿತರ ಬೆಳೆಗಳಿಗೆ ತೊಂದರೆಯಾಗುತ್ತದೆ ಈ ಹಿನ್ನಲೆಯಲ್ಲಿ ಲಾಂಟಾನಾ ಮತ್ತು ಪಾರ್ಥೇನಿಯಂ ಗಿಡಗಳನ್ನು ನಾಶಪಡಿಸಲು ಸೂಕ್ತವಾದ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿರುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಚಾಮರಾಜನಗರ ಲೋಕಸಭಾ ಸದಸ್ಯ ಆರ್. ದೃವನಾರಾಯಣ್ ಕೇಂದ್ರ ಸಚಿವರಿಗೆ ಮನವಿಯೊಂದನ್ನು ನೀಡಿ, ತಮ್ಮ ಮತ ಕ್ಷೇತ್ರ ವ್ಯಾಪ್ತಿಗೆ ಬರುವ ಹುಲಿ ಸಂರಕ್ಷಿತ ಪ್ರದೇಶವ ವ್ಯಾಪ್ತಿಯಲ್ಲಿ ರೈಲು ಕಂಬಿಯ ತಡೆ ಗೋಡೆಯನ್ನು ನಿರ್ಮಿಸಲು ಅನುಮತಿ ನೀಡುವಂತೆ ಹಾಗೂ ರಾಷ್ಟ್ರೀಯ ಮಹತ್ಮಾ ಗಾಂಧಿ ಯೋಜನೆಯಡಿ ಅರಣ್ಯದೊಳಗೆ ಅಭಿವೃದ್ದಿಯೋಜನೆಗಳನ್ನು ಅನುಷ್ಠಾನಗೊಳಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು.
ಕೇಂದ್ರ ಸಚಿವ ಹರ್ಷವರ್ಧನ್ ಕೆ.ಗುಡಿಯ ಪ್ರಾಕೃತಿಕ ಪರಿಸರವನ್ನು ವೀಕ್ಷಿಸಿದ ಬಳಿಕ ರಸ್ತೆ ಮಾರ್ಗವಾಗಿ ಮೈಸೂರು ಹಾಗೂ ಬಂಡೀಪುರದ ಕಡೆ ತೆರಳಿದರು. ನಾಳೆ ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸಂಜೆ ಬೆಂಗಳೂರಿಗೆ ತೆರಳಿ ಅಲ್ಲಿಂದ ದೆಹಲಿಗೆ ತೆರಳಲಿದ್ದಾರೆ.
ಕೇಂದ್ರ ಸಚಿವರೊಂದಿಗೆ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಶಂಕರ್, ರಾಜ್ಯ ವನ್ಯ ಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.