ಮಡಿಕೇರಿ: ಯುವಕನ ಕೊಲೆ
ಮಡಿಕೇರಿ, ಆ.22 : ಗೋಣಿಕೊಪ್ಪದ ಮೈಸೂರಮ್ಮ ಬಡಾವಣೆ ಸಮೀಪ ವ್ಯಕ್ತಿಯೊಬ್ಬರ ಹತ್ಯೆ ನಡೆದಿದೆ. ಗೋಣಿಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೆಲ್ವಿ ಅವರ ಸಹೋದರ ರಮೇಶ್ (32) ಕೊಲೆಯಾದ ವ್ಯಕ್ತಿ.
ಮೈಸೂರಮ್ಮ ಬಡಾವಣೆಯ ಖಾಲಿಸೈಟ್ನಲ್ಲಿ ರಮೇಶ್ಗೆ ಸೇರಿದ ಗೂಡ್ಸ್ ವಾಹನ ಕೆಸರಿನಲ್ಲಿ ಹೂತಿರುವುದು ಗೋಚರಿಸಿದೆ. ವಾಹನದಲ್ಲೂ ರಕ್ತ ಚೆಲ್ಲಿದ್ದು, ಕತ್ತು ಸೀಳಿಕೊಂಡಿರುವ ಮೃತದೇಹದ ಬಳಿ ಮದ್ಯದ ಬಾಟಲಿ ದೊರಕಿದೆ.
ವಾರದ ಹಿಂದೆ ಬೆಂಗಳೂರಿನಲ್ಲಿ ನೆಲೆಸಿರುವ ತನ್ನ ಅತ್ತೆಯ ಮಗಳೊಂದಿಗೆ ರಮೇಶ್ಗೆ ಮದುವೆ ನಿಶ್ಚಯವಾಗಿತ್ತು. ರಮೇಶ್ಗೆ ಯಾರೂ ಶತ್ರುಗಳಿಲ್ಲವೆಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ. ಸಹೋದರಿ ಸೆಲ್ವಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೈಸೂರಮ್ಮ ಬಡಾವಣೆಯಲ್ಲಿ ನೂತನ ಬಾರ್ ತಲೆ ಎತ್ತಿದ್ದು, ಬಾರ್ ಪಕ್ಕದಲ್ಲಿರುವ ಖಾಲಿ ಸೈಟ್ನಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರಸ್ತೆ ಕುಡುಕರ ಅಡ್ಡೆಯಾಗಿದ್ದು, ಗಾಂಜಾ ವ್ಯಸನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಸ್ಥಳೀಯ ಜಿ.ಪಂ ಸದಸ್ಯ ಸಿ.ಕೆ. ಬೋಪಣ್ಣ ಭೇಟಿ ನೀಡಿದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.