ದಾವಣಗೆರೆ: ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ದಾವಣಗೆರೆ,ಆ.22: ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಅಶ್ಲೀಲ ಪೋಸ್ಟರ್, ಬ್ಯಾನರ್ ಹರಿದು ಹಾಕುವ ಮೂಲಕ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಘಟಕವು ಪ್ರತಿಭಟನೆ ನಡೆಸಿತು.
ನಗರದ ಗಾಂಧಿ ವೃತ್ತದಿಂದ ಪುಷ್ಪಾಂಜಲಿ ಚಿತ್ರ ಮಂದಿರವರೆಗೆ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ, ಸ್ತ್ರೀ ಶೋಷಣೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಅಶ್ಲೀಲ ಪೋಸ್ಟರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಎಐಎಂಎಸ್ಎಸ್ ಜಿಲ್ಲಾ ಸಂಘಟನಾಕಾರ ಬನಶ್ರೀ, ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಮಹಿಳೆಯರು, ಹೆಣ್ಣು ಮಕ್ಕಳು ಹೆಜ್ಜೆ ಹೆಜ್ಜೆಗೂ
ಸವಾಲು, ದೌರ್ಜನ್ಯ, ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಇದೆ. ಪುರುಷ ಪ್ರಧಾನ ಮನೋಭಾವದಿಂದಾಗಿ ಹೆಣ್ಣಿಗೆ ಹುಟ್ಟುವ ಹಕ್ಕನ್ನೇ ನಿರಾಕರಿಸಲಾಗಿದೆ ಎಂದ ಅವರು, ಸ್ತ್ರೀಭ್ರೂಣ ಹತ್ಯೆಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ.
ಶಾಲಾ-ಕಾಲೇಜು, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ, ಕಡೆಗೆ ಮನೆಯಲ್ಲೂ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಸಾಂಸ್ಕøತಿಕ ಅಧಃಪತನವೇ ಇಷ್ಟೆಲ್ಲಾ ಅನಾಹುತ, ದುರಂತಕ್ಕೂ ಕಾರಣವಾಗುತ್ತಿದೆ. ಸಮೂಹ ಮಾಧ್ಯಮಗಳಲ್ಲಿ, ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಅಶ್ಲೀಲತೆಯು, ಮಹಿಳೆಯನ್ನು ಭೋಗದ ವಸ್ತುವೆಂಬಂತೆ ಮಾಡಿವೆ. ಹಣ್ಣಿನ ಗೌರವಕ್ಕೂ ಧಕ್ಕೆಯುಂಟು ಮಾಡುತ್ತಿವೆ. ಇಂತಹದ್ದಕ್ಕೆಲ್ಲಾ ಕೊನೆ ಹಾಡಬೇಕಾಗಿದೆ ಎಂದು ತಿಳಿಸಿದರು.
ಮದ್ಯಪಾನ, ಅಶ್ಲೀಲ ಸಿನಿಮಾ ಸಿನಿಮಾ ಸಾಹಿತ್ಯ, ಜಾಹೀರಾತುಗಳು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರಚೋದನೆ ನೀಡುತ್ತಿವೆ. ಅಪರಾಧಿಗಳಿಗೆ ಶಿಕ್ಷೆಯ ಭಯವಿಲ್ಲದಂತಾಗಿದೆ. ಈ ಸ್ಥಿತಿಯಲ್ಲಿ ಅತ್ಯಂತ ಕಡಿಮೆ ಅವದಿಯಲ್ಲೇ ಉಗ್ರವಾದ, ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳ್ಳಲಿ. ಅಶ್ಲೀಲ ಸಿನಿಮಾ ಸಾಹಿತ್ಯ, ಅಶ್ಲೀಲ ಸಿನಿಮಾ, ಜಾಹೀರಾತುಗಳಿಗೆ ಕಡಿವಾಣ ಹಾಕುವ ಕೆಲಸ ಸರ್ಕಾರ ಮಾಡಲಿ ಎಂದು ಅವರು ಆಗ್ರಹಿಸಿದರು.
ನಮ್ಮನ್ನು ಆಳುವ ಸರ್ಕಾರಗಳು ಮಹಿಳೆಯರಿಗಾಗಿ ಅನೇಕ ಹುಸಿ ಭರವಸೆ ನೀಡುತ್ತಾ, ಕಾಲಹರಣ ಮಾಡಿವೆ. ಅವೆಲ್ಲವೂ ಕೇವಲ ಘೋಷಣೆಯಾಗಿವೆಯಷ್ಟೇ. ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಲು ಸರ್ಕಾರಗಳು ಚಿಂತನೆ ನಡೆಸಿರುವುದು, ಆಳುವವರಲ್ಲಿನ ನೈತಿಕ ಅಧಃಪತನಕ್ಕೆ ಕಾರಣವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಸಂಚಾಲಕಿ ಜ್ಯೋತಿ ಕುಕ್ಕವಾಡ, ಸಂಘಟನೆ ಮುಖಂಡರಾದ ಭಾರತಿ, ಸವಿತಾ, ಆರತಿ, ಮೈತ್ರಿ ಉಜ್ವಲ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕಿ ಜಿ.ಎಂ. ರೂಪಾ ಮತ್ತಿತರರಿದ್ದರು.