ಸರಕಾರಗಳ ಜನವಿರೋಧಿ ನೀತಿಯ ವಿರುದ್ಧ ಸೆ.4 ರಂದು ಬೆಂಗಳೂರು ಚಲೋ
ತುಮಕೂರು, ಆ.30: ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಯ ವಿರುದ್ಧ ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ಸೆಪ್ಟಂಬರ್ 4 ರಂದು “ಬೆಂಗಳೂರು ಚಲೋ” ಬೃಹತ್ ರ್ಯಾಲಿಯ ಮೂಲಕ ಕಾರ್ಮಿಕರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರಮೋದಿ ಸರಕಾರ ತಂದಿರುವ ಹಲವಾರು ಕಾರ್ಮಿಕ ವಿರೋಧಿ ಕಾನೂನುಗಳಿಂದ ಅಸಂಘಟಿತ ವಲಯದ ಕಾರ್ಮಿಕರ ಸ್ಥಿತಿ ಹೇಳ ತೀರದಾಗಿದೆ.ಪಿ.ಎಫ್.,ಇಎಸ್ಐ ಇನ್ನಿತರ ಯಾವುದೆ ಭದ್ರತೆಯಿಲ್ಲದೆ ದೇಶದ ಸುಮಾರು 40 ಕೋಟಿಗೂ ಹೆಚ್ಚು ಅಸಂಘಟಿತವಲಯದ ಕಾರ್ಮಿಕರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ದೂರಿದರು.
ಚುನಾವಣೆ ಪೂರ್ವ ಭರವಸೆ ಈಡೇರಿಸುವಲ್ಲಿ ವಿಫಲ:ಕೇಂದ್ರದ ನರೇಂದ್ರಮೋದಿ ಸರಕಾರ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.ಬಿಜೆಪಿ ಅಧಿಕಾರಕ್ಕೆ ಬಂದರೆ 100 ದಿನದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಎಲ್ಲಾ ಜನಸಾಮಾನ್ಯರ ಖಾತೆಗೆ ತಲಾ 15 ಲಕ್ಷ ಜಮಾ ಮಾಡುವ ಭರವಸೆ ನೀಡಿದ್ದ ಮೋದಿ, ಇದುವರೆಗೂ ಒಂದು ರೂ ಕಪ್ಪು ಹಣ ತರಲು ಸಾಧ್ಯವಾಗಿಲ್ಲ.ಜನ ಸಾಮಾನ್ಯರು ಕಾಯುವುದು ತಪ್ಪಿಲ್ಲ.ಈ ಬಗ್ಗೆ ಚಕಾರವೆತ್ತದೆ ಭಂಡತನ ತೋರುತ್ತಿದೆ ಎಂದು ಎನ್.ಶಿವಣ್ಣ ಲೇವಡಿ ಮಾಡಿದರು.
ಅಗತ್ಯ ವಸ್ತು ಬೆಲೆ ಇಳಿಸುವಲ್ಲಿ ಗಮನ ಇಲ್ಲ:ಪೆಟ್ರೋಲ್, ಡಿಸೇಲ್, ಅಕ್ಕಿ, ಬೆಳೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದ ಬಿಜೆಪಿಯವರು ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಆಹಾರ ಪದಾರ್ಥ ಸ್ಭೆರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ನಿಯಂತ್ರಿಸಲು ಸಾಧ್ಯವಾಗಿಲ್ಲ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಕಡಿಮೆಯಿದ್ದರೂ ಭಾರತದಲ್ಲಿ ಮಾತ್ರ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ.ಇದು ಜನಸಾಮಾನ್ಯರು, ಕಾರ್ಮಿಕರ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರಿತ್ತಿದೆ.ಅದ್ದರಿಂದ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ 18 ಸಾವಿರ ರೂ ಮಾಸಿಕ ವೇತನ, ಪಿಂಚಿಣಿ, ನಿವೃತ್ತಿ ವೇತನ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಎನ್.ಶಿವಣ್ಣ ತಿಳಿಸಿದರು.
ನಿಯಂತ್ರಣಕ್ಕೆ ಬಾರದ ಭ್ರಷ್ಟಾಚಾರ, ಬಗೆಹರಿಸಯದ ನಿರುದ್ಯೋಗ ಸಮಸ್ಯೆ:ಬಿಜೆಪಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಲ್ಲಿ ಕೇವಲ 4 ಲಕ್ಷ ಮಂದಿಗೆ ಮಾತ್ರ ಉದ್ಯೋಗ ನೀಡಿದೆ.ವೃತ್ತಿಪರ ಕೋರ್ಸುಗಳನ್ನು ಮಾಡಿದ ಪದವಿ, ಸ್ನಾತಕೋತ್ತರ ಪದವಿಧರರು ಉದ್ಯೋಗವಿಲ್ಲದೆ ಪರದಾಡುವಂತಹ ಸ್ಥಿತಿಯಿದೆ.
ಭ್ರಷ್ಟಾಚಾರ ನಿಯಂತ್ರಿಸುವುದಾಗಿ ಹೇಳಿದ್ದ ಸರಕಾರ ಬ್ಯಾಂಕುಗಳಲ್ಲಿ ಸಾಲ ಮಾಡಿ ತೀರಸಲಾಗದ ಮಲ್ಯಗೆ ಮತ್ತು ಹಗರಣದಲ್ಲಿ ದುಡ್ಡು ಮಾಡಿದ ಲಲಿತ್ ಮೋದಿಗೆ ವಿದೇಶಕ್ಕೆ ಹೋಗಲು ನೆರವು ನೀಡಿ, ಅವರ ಭಾರತಕ್ಕೆ ಕರೆತರುವ ನಾಟಕವಾಡುತ್ತಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ.ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಜೊತೆಗೆ, ನಿರುದ್ಯೋಗ ಸಮಸ್ಯೆ ನಿವಾರಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಕಾರ್ಮಿಕರ ಹೋರಾಟಗಳಿಗೆ ಸ್ಪಂದಿಸಿ ಕೆಲ ಬೇಡಿಕೆಗಳನ್ನು ಈಡೇರಿಸಿದ್ದರೂ, ಸಂಪೂರ್ಣವಾಗಿ ಸಮಸ್ಯೆಗಳ ನಿವಾರಣೆಗೆ ಮುಂದಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳ ಜೊತೆಗೆ, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟಂಬರ್ 04 ರಂದು ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಿಲಾಗಿದೆ.ಸುಮಾರು 50 ಸಾವಿರ ಜನ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ತುಮಕೂರು ಜಿಲ್ಲೆಯಿಂದ 5 ಸಾವಿರ ಜನ ಪಾಲ್ಗೊಳ್ಳುವರು ಎಂದು ಶಿವಣ್ಣ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ನೇತೃತ್ವದ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಕಂಬೇಗೌಡ,ಗಿರೀಶ್, ಕಲಾವತಿ,ಚಂದ್ರಶೇಖರ್,ಸತ್ಯನಾರಾಯಣ,ಮನ್ಮಥ,ಮಂಜಳಮ್ಮ,ದೇವರಾಜು,ಗೋವಿಂದರಾಜು, ಗೌಡರಂಗಪ್ಪ, ಚಂದ್ರಶೇಖರ್, ಕಾಂತರಾಜು, ಭಾಗ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು.