ಚಿಕ್ಕಬಳ್ಳಾಪುರ : ಲಕ್ಷ್ಮೀ ಹೆಬ್ಬಾಳ್ಕರ್ ಗಡಿಪಾರಿಗೆ ಆಗ್ರಹಿಸಿ ಧರಣಿ
ಚಿಕ್ಕಬಳ್ಳಾಪುರ,ಸೆ.2: ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡಲು ಆಗ್ರಹಿಸಿ ಕರವೇ ಕನ್ನಡಿಗರ ಸಾರಥ್ಯ ಸಂಘಟನೆಯು ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆ ಕಾರ್ಯಕರ್ತರು, ಮುಖಂಡರು, ಹೆಬ್ಬಾಳ್ಕರ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ಅಗಲಗುರ್ಕಿ ಚಲಪತಿ, ಕನ್ನಡ ನಾಡಿನಲ್ಲಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹಾರಾಷ್ಟ್ರಕ್ಕೆ ಜೈ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ ಅವರು, ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಅವರನ್ನು ಕೂಡಲೆ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ನೆಲೆಸಿ, ಇಲ್ಲಿನ ಸೌಲಭ್ಯವನ್ನೆಲ್ಲಾ ಬಳಸಿಕೊಂಡು, ರಾಜಕೀಯವಾಗಿಯೂ ನೆಲಕಂಡುಕೊಂಡಿರುವ ಹೆಬ್ಬಾಳ್ಕರ್ ಅವರು ಮಹಾರಾಷ್ಟ್ರದ ಮೇಲೆ ಪ್ರೀತಿ ತೋರುತ್ತಿದ್ದಾರೆ. ನಾಡಿನ ಭಾಷೆ, ನೆಲ, ಜಲಕ್ಕೆ ಕುತ್ತು ಬರಲು ಇಂತಹವರೆ ಕಾರಣ. ಕೂಡಲೆ ರಾಜ್ಯದಿಂದ ಗಡಿಪಾರು ಮಾಡದಿದ್ದರೆ, ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ದೇವರಾಜ್, ರವಿ, ಮುಬಾರಕ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.