ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ಕಾರಣ: ಬೋರೇ ಗೌಡ
ಮಂಡ್ಯ, ಸೆ.20: ನಗರಸಭೆ ವತಿಯಿಂದ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಬುಧವಾರ ಕ್ರೀಡಾಕೂಟ ಬುಧವಾರ ನಡೆಯಿತು.
ಈ ವೇಳೆ ಮಾತನಾಡಿದ ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ, ನಗರದ ಸ್ವಚ್ಛತೆಗೆ ಪೌರಕಾರ್ಮಿಕರೇ ಕಾರಣ. ಅವರು ಕೆಲಸ ಮಾಡದಿದ್ದಲ್ಲಿ ಕಸದ ರಾಶಿಯೇ ನಗರವನ್ನು ಆವರಿಸುತ್ತದೆ. ಪೌರಕಾರ್ಮಿಕರು ತನ್ನ ಆರೋಗ್ಯವನ್ನು ಲೆಕ್ಕಿಸದೆ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡುತ್ತಾರೆ. ಸೆ.23ರಂದು ಪೌರಕಾರ್ಮಿಕರ ದಿನಾಚರಣೆ ನಡೆಸಲಾಗುತ್ತಿದ್ದು, ಎಂದಿನಂತೆ ಪೌರಕಾರ್ಮಿಕರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ನಗರಸಭೆ ವತಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಪೌರಕಾರ್ಮಿಕರು ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಜಾತಮಣಿ, ಆಯುಕ್ತ ಟಿ.ಎನ್. ನರಸಿಂಹಮೂರ್ತಿ, ಪರಿಸರ ಅಭಿಯಂತರ ಸುಬ್ರಹ್ಮಣ್ಯ, ಆರೋಗ್ಯಾಧಿಕಾರಿಗಳಾದ ಹರಿಪ್ರಸಾದ್, ಚಲುವರಾಜು, ಸಂಜನಾ ಇತರರು ಹಾಜರಿದ್ದರು.