ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಚಾಲನೆ
ಮಡಿಕೇರಿ, ಸೆ.23: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತ್ತಿದೆ. ಗಾಂಧಿ ಮೈದಾನದಲ್ಲಿ ನಿರ್ಮಾಣ ಗೊಂಡಿರುವ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಯಾವುದೇ ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರೂ ಒಗ್ಗೂಡಲು ದಸರಾ ಉತ್ಸವ ಸಹಕಾರಿಯಾಗಿದೆ ಎಂದರು. ಈ ಉತ್ಸವದ ಐತಿಹಾಸಿಕ ಹಿನ್ನಲೆಯನ್ನು ಅವಲೋಕನ ಮಾಡಬೇಕಿದೆ. ಶಾಂತಿ - ಸೌಹಾರ್ದತೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸರ್ವರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಕೋರಿದರು.
ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಕಳೆದೆರಡು ವರ್ಷ ಕಡಿಮೆ ಅನುದಾನದಲ್ಲೂ ಎಲ್ಲರ ಸಹಕಾರದಿಂದ ದಸರಾ ಯಶಸ್ವಿಯಾಗಿದೆ. 1987ರಲ್ಲಿ ಆಗಿನ ಪರಿಸ್ಥಿತಿಗೆ ರಚನೆಯಾದ ಬೈಲಾ ಇದೀಗ ಅಗತ್ಯ ತಿದ್ದುಪಡಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ದಸರಾ ಸಮಿತಿ ಹಾಗೂ ನಗರಸಭಾ ಅಧ್ಯಕ್ಷರೂ ಆಗಿರುವ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ, ಕಾರ್ಯದರ್ಶಿ, ಆಯುಕ್ತೆ ಬಿ. ಶುಭ, ನಗರಸಭಾ ಸದಸ್ಯರುಗಳ, ವಿವಿಧ ಉಪಸಮಿತಿಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಇದ್ದರು. ಇದಕ್ಕೂ ಮುನ್ನ ಶ್ರೀಕೃಷ್ಣ ಉಪಾಧ್ಯಾಯರಿಂದ ಸಾಂಪ್ರದಾಯಿಕ ದುರ್ಗಿ ಪೂಜೆ ನೆರೆವೇರಿತು. ಮಂಞಂಡ್ರ ರೇಖಾ ಉಲ್ಲಾಸ್ ಪ್ರಾರ್ಥಿಸಿದರು. ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.