ದಸರಾ ಮಾದರಿಯಲ್ಲೆ ‘ಹಂಪಿ ಉತ್ಸವ’ ಆಚರಣೆಗೆ ಸಿದ್ಧತೆ
ಬಳ್ಳಾರಿ, ಸೆ. 25: ಮೈಸೂರು ದಸರಾ ಉತ್ಸವದ ಮಾದರಿಯಲ್ಲೇ ವಿಶ್ವ ವಿಖ್ಯಾತ ‘ಹಂಪಿ ಉತ್ಸವ’ವೂ ಅತ್ಯಂತ ಪ್ರತಿಷ್ಠಿತವಾಗಿದ್ದು, ಉತ್ಸವ ನೋಡಲು ಬರುವ ಜನರು ಸಂತೋಷದಿಂದ ಮತ್ತು ಸವಿನೆನಪುಗಳೊಂದಿಗೆ ಮರಳುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಹಂಪಿ ಉತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಂಪಿ ಉತ್ಸವವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಎಲ್ಲರು ಕಂಕಣಬದ್ಧರಾಗಬೇಕು ಎಂದು ಸಲಹೆ ಮಾಡಿದರು.
ಹಂಪಿ ಉತ್ಸವಕ್ಕೆ ಕಡಿಮೆ ಸಮಯ ಅತ್ಯಂತ ಕಡಿಮೆ ಇದ್ದು, ಎಲ್ಲರೂ ಹೆಚ್ಚಿನ ಗಮನಹರಿಸಬೇಕು. ಹಂಪಿ ಉತ್ಸವ ಕಳೆದ ಬಾರಿಯಂತೆ ಈ ಬಾರಿಯೂ ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು, ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅ.4ರೊಳಗೆ ತಮ್ಮ ಸಮಿತಿಗಳಲ್ಲಿನ ಸದಸ್ಯರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಜಿಪಂ ಸಿಇಒ ರಾಜೇಂದ್ರ, ಎಸಿ ಪ್ರಶಾಂತ ಕುಮಾರ ಮಿಶ್ರಾ, ಹೆಚ್ಚುವರಿ ಎಸ್ಪಿ ಝಂಡೇಕರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.