ಜಾತಿ, ಧರ್ಮ ಒಡೆಯುವ ಕೆಲಸವನ್ನು ಅನೇಕರು ನಡೆಸುತ್ತಿದ್ದಾರೆ: ಈಶ್ವರಪ್ಪ
ಕಡೂರು, ಸೆ.25: ಜಾತಿ ಮತ್ತು ಧರ್ಮ ಒಡೆಯುವ ಕೆಲಸವನ್ನು ಅನೇಕರು ನಡೆಸುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 4ನೆ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ ಅವರು, ಧರ್ಮವನ್ನು ಒಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಜಗದ್ಗುರುಗಳು ಹೇಳಿದ್ದಾರೆ. ಸಾಧು-ಸಂತರು ಮತ್ತು ಭಾರತ ಮಾತೆಗೆ ಗೌರವ ಸ್ಥಾನ ಇರುವವರೆಗೂ ಧರ್ಮ ಒಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದರು.
ಧರ್ಮಕ್ಕೆ ಗೌರವ ಸಲ್ಲಿಸುವ ಜೊತೆಗೆ ಧರ್ಮದ ಬಗ್ಗೆ ವಿಶ್ವಾಸ ಇರಿಸಬೇಕು. ಶತ-ಶತಮಾನಗಳಿಂದ ಧರ್ಮದ ಬಗ್ಗೆ ಜನರಲ್ಲಿ ವಿಶ್ವಾಸವಿದೆ. ರಂಭಾಪುರಿ ಜಗದ್ಗುರುಗಳು ಕಳೆದ 25 ವರ್ಷಗಳಿಂದ ಜನಜಾಗೃತಿ ಮತ್ತು ಧರ್ಮ ಜಾಗೃತಿ ನಡೆಸುತ್ತಾ ಬಂದಿದ್ದಾರೆ. ಧರ್ಮದಿಂದ ದುಷ್ಟರ ಸಂಹಾರ ಸಾಧ್ಯ. ಶಕ್ತಿ ದೇವತೆಗಳಿಂದ ದೇಶದ ರಕ್ಷಣೆ ಸಾಧ್ಯ. ವಿಶ್ವದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚುತ್ತಿದೆ. ಪ್ರಪಂಚದ ಪ್ರತಿ ದೇಶಗಳಿಗೂ ಶಾಂತಿಗಾಗಿ ಹಂಬಲಿಸುತ್ತಿವೆ. ಆ ದೇಶಗಳು ಭಾರತದತ್ತ ತನ್ನ ದೃಷ್ಟಿ ನೆಟ್ಟಿವೆ ಎಂದರು.