ಕನಕಪುರ: ಈಜಲು ಹೋಗಿದ್ದ ವಿದ್ಯಾರ್ಥಿ ಮೃತ್ಯು
ಎನ್ನೆಸ್ಸೆಸ್ ಕ್ಯಾಂಪ್ ವೇಳೆ ಘಟನೆ
ಕನಕಪುರ, ಸೆ.25: ಬೆಂಗಳೂರು ನ್ಯಾಷನಲ್ ಕಾಲೇಜಿನಿಂದ ಎನ್ನೆಸ್ಸೆಸ್ ಕ್ಯಾಂಪ್ನಲ್ಲಿ ಭಾಗವಹಿಸಲು ಬಂದಿದ್ದ ವಿದ್ಯಾರ್ಥಿಯೊರ್ವ ಕಲ್ಯಾಣಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಬೆಂಗಳೂರು ರಸ್ತೆ ರಾವುಗೋಡ್ಲು ಸಮೀಪದ ಬೋಳಾರೆ ಗ್ರಾಮದ ಬಳಿ ನಡೆದಿದೆ.
ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿಶ್ವಾಸ್ (17)ಮೃತ ದುರ್ದೈವಿ. ಈತ ಬೆಂಗಳೂರು ಹನುಮಂತನಗರದ ನಿವಾಸಿ ಆಟೋ ಡ್ರೆವರ್ ಗೋವಿಂದು ಪುತ್ರ.
ಕಾಲೇಜಿನಿಂದ ಶನಿವಾರ 25 ವಿದ್ಯಾರ್ಥಿಗಳ ತಂಡ ಎನ್ನೆಸ್ಸೆಸ್ ಕ್ಯಾಂಪ್ಗಾಗಿ ರಾವುಗೋಡ್ಲು-ಬೋಳಾರೆ ಗ್ರಾಮದ ಗುಂಡಾಂಜನೇಯಸ್ವಾಮಿ ದೇವಸ್ಥಾನದ ಬಳಿಯಿರುವ ವಿಶ್ವಾಲಯ ರಾಮ ಆಶ್ರಮಕ್ಕೆ ಬಂದಿದ್ದರು. ಎರಡು ದಿನಗಳ ಕಾಲ ರಜೆಯಿದ್ದ ಕಾರಣ ಕ್ಯಾಂಪ್ ಮುಗಿಸಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗದ್ದರು ಎನ್ನಲಾಗಿದೆ.
ರವಿವಾರ ಬೆಳಗ್ಗೆ ಸ್ನೇಹಿತರೆಲ್ಲರೂ ಸಮೀಪದಲ್ಲಿದ್ದ ಕಲ್ಯಾಣಿಯಲ್ಲಿ ಈಜಲು ತೆರಳಿದ್ದರು. ಸ್ನೇಹಿತರೆಲ್ಲರೂ ಸೆಲ್ಫಿ ತೆಗೆದು ಕೊಳ್ಳುವ ಉತ್ಸಾಹದಲ್ಲಿ ನಿರತರಾಗಿದ್ದ ಸಂದರ್ಭ ವಿಶ್ವಾಸ್ ಇವರೆಲ್ಲರನ್ನು ಬಿಟ್ಟು ಈಜಲು ಹೋಗಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಬಳಿಕ ವಿಶ್ವಾಸ್ ಕಾಣದಿರುವುದನ್ನು ಗಮನಿಸಿದ ಸ್ನೇಹಿತರು ನೀರಿನಲ್ಲಿ ಮುಳುಗಿದ್ದಾನೆಂದು ಖಚಿತಪಡಿಸಿಕೊಂಡು ಕಗ್ಗಲಿಪುರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಶವವನ್ನು ಹೊರತೆಗೆದು ಪ್ರಕರಣ ದಾಖಲಿಸಿದ್ದಾರೆ.