ಪ್ರೀತಿ-ವಿಶ್ವಾಸ, ಶಾಂತಿ, ಸೌಹಾರ್ದತೆಯಿಂದ ಪ್ರಗತಿ ಸಾಧ್ಯ: ಸಚಿವ ದೇಶಪಪಾಂಡೆ
ಹೊನ್ನಾವರ, ಸೆ.25: ಮೀನುಮಾರುಕಟ್ಟೆಯಿಂದ ಹಳದೀಪುರದ ಜನರಿಗೆ ತುಂಬಾ ಅನುಕೂಲವಾಗಿದ್ದು, ಮೀನುಗಾರ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಸಚಿವ ಆರ್.ವಿ.ದೇಶಪಪಾಂಡೆ ಹೇಳಿದರು.
ತಾಲೂಕಿನ ಹಳದೀಪುರದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನೂತನವಾಗಿ ನಿರ್ಮಾಣಗೊಂಡಿರುವ 86 ಲಕ್ಷ ರೂ. ವೆಚ್ಚದ ಸುಸಜ್ಜಿತ ಮೀನುಮಾರುಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿಯಲ್ಲಿ 86 ಲಕ್ಷ ರೂ. ವೆಚ್ಚದಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಇದರಿಂದ ಈ ಭಾಗದ ಮೀನುಗಾರರಿಗೆ ಹೆಚ್ಚಿನ ಅನುಕೂಲವಾಗಿದೆ. ಕಾಂಗ್ರೆಸ್ ಸರ್ಕಾರ ಎಲ್ಲಾ ಜಾತೀಯ, ಎಲ್ಲಾ ಧರ್ಮವನ್ನು ಒಂದಾಗಿಸಿಕೊಂಡು ಜನಪರ ನಿಲುವಿನಿಂದ ಸರ್ಕಾರ ಮುನ್ನಡೆಸುತ್ತಿದೆ. ವಿವಿಧ ಸರಣಿ ಭಾಗ್ಯ ಯೋಜನೆಗಳನ್ನು ನೀಡಿ ಜನರಿಗೆ ಅನುಕೂಲ ಕಲ್ಪಿಸಿದೆ. ಒಗ್ಗಟ್ಟು, ಪ್ರೀತಿ-ವಿಶ್ವಾಸ, ಶಾಂತಿ, ಸೌಹಾರ್ದತೆಯಿಂದ ಪ್ರಗತಿ ಸಾಧ್ಯ ಎಂದರು.
ನಮ್ಮ ಸರ್ಕಾರ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಿದೆ. ಕೇಂದ್ರ ಸರ್ಕಾರ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಬೇಕೆಂದು ಸೂನಿಯಾ ಗಾಂಧಿ ಅವರು ಪ್ರಧಾನಿಯವರಿಗೆ ಮನವಿ ನೀಡಿದ್ದಾರೆ. ಇದರಿಂದ ಮಹಿಳೆಯರು ಸ್ವಾವಲಂಬಿ ರಾಜಕೀಯ ಶಕ್ತಿ ಪಡೆಯಲು ಸಾಧ್ಯ ಎಂದರು.
ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ, ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಪ್ರಾಧಿಕಾರದ ಅನುದಾನದಿಮದ 3 ಜಿಲ್ಲೆಗಳಿಗೆ ಕೋಟ್ಯಾಂತರ ಅನುದಾನದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಹಳದೀಪುರ ಗ್ರಾಮ ಗ್ರಾಮವಿಕಾಸ ಯೋಜನೆಗೆ ಸೇರ್ಪಡೆಯಾಗಿದ್ದು, 1 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ. ಇದರಿಂದ ಅನೇಕ ಮೂಲಭೂತ ಸೌಕರ್ಯ ಒದಗಿಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಡಾ. ಜಿಜಿ ಸಭಾಹಿತ, ತಾಪಂ ಅಧ್ಯಕ್ಷ ಉಲ್ಲಾಸ ನಾಯ್ಕ, ಪಪಂ ಅಧ್ಯಕ್ಷೆ ಜೈನಾಬಿ ಸಾಬ್, ಜಿಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ಉಪವಿಭಾಗಾಧಿಕಾರಿ ಮಂಜುನಾಥ, ತಹಶೀಲ್ದಾರ್ ವಿ.ಆರ್.ಗೌಡ, ಇಒ ಎಂ.ವಿ.ಹೆಗಡೆ, ಗ್ರಾಪಂ ಅಧ್ಯಕ್ಷೆ ಗುಣಮಾಲಾ ಇಂದ್ರ, ಗ್ರಾಪಂ ಉಪಾಧ್ಯಕ್ಷ ಗಣೇಶ ಪೈ, ಜಗದೀಪ ತೆಂಗೇರಿ, ದಾಮೋದರ ನಾಯ್ಕ ಇತರರು ಇದ್ದರು.