ವಿಧಾನ ಸೌಧ ವಜ್ರಮಹೋತ್ಸವ: 10 ಕೋಟಿ ರೂ.ವೆಚ್ಚದಲ್ಲಿ ಕಾರ್ಯಕ್ರಮ ಮುಗಿಸಲು ಸಿಎಂ ಸೂಚನೆ
ಬೆಂಗಳೂರು, ಅ.17: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಮತ್ತು ವಿಧಾನ ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ವಿಧಾನ ಸೌಧ ವಜ್ರಮಹೋತ್ಸವ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದರು.
ವಿಧಾನಸೌಧ ವಜ್ರ ಮಹೋತ್ಸವ ನಡೆಯುವ ಎರಡು ದಿನಗಳ ಕಾರ್ಯಕ್ರಮ ಸೇರಿದಂತೆ ವಿವಿಧ ಉದ್ದೇಶಗಳಿಗೆ ವಿಧಾನಸಭೆ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಕಳುಹಿಸಿರುವ 27 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಯು ತಿರಸ್ಕರಿಸಿ ಹಿಂದಕ್ಕೆ ಕಳುಹಿಸಿರುವ ವಿಚಾರದ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ನಡೆಯಿತು.
ಮಾತುಕತೆಯ ವೇಳೆ ಸಿಎಂ ಸಿದ್ದರಾಮಯ್ಯ ಅವರು ವಜ್ರಮಹೋತ್ಸವದ ಅಂಗವಾಗಿ ರೂಪಿಸಲಾದ ಯೋಜನೆಗಳ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
27 ಕೋಟಿ ರೂ. ಖರ್ಚು ಮಾಡಿದ್ರೆ ತಪ್ಪು ಸಂದೇಶ ರವಾನೆಯಾಗುತ್ತದೆ. ರಾಜ್ಯದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಹೀಗಾಗಿ ಹೆಚ್ಚು ವೆಚ್ಚ ಬೇಡ. ಕಾರ್ಯಕ್ರಮ 1 ದಿನಕ್ಕೆ ನಿಗದಿ ಮಾಡಿ. ಶಾಸಕರಿಗೆ ಉಡುಗೊರೆ ನೀಡುವುದು ಬೇಡ. ಒಟ್ಟು 10 ಕೋಟಿ ರೂ. ಮಿತಿಯೊಳಗೆ ಕಾರ್ಯಕ್ರಮ ಮುಗಿಸಲು ಸಿಎಂ ಸಲಹೆ ನೀಡಿದರು ಎಂದು ಮುಖ್ಯ ಕಚೇರಿಯ ಮೂಲಗಳು ತಿಳಿಸಿವೆ.
ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾರ್ಯಕ್ರಮ ಬೋಜನ ವೆಚ್ಚಕ್ಕೆ 3.47ಕೋಟಿ ರೂ. ಸೇರಿದಂತೆ ಒಟ್ಟು 26.87 ಕೋಟಿ ರೂ.ವೆಚ್ಚದ ಅಂದಾಜಿನ ಪ್ರಸ್ತಾವನೆಯನ್ನು ವಿಧಾನಸಭೆಯ ಸಚಿವಾಲಯವು ಹಣಕಾಸು ಇಲಾಖೆಗೆ ಕಳುಹಿಸಿತ್ತು. ಆದರೆ ಭಾರಿ ವೆಚ್ಚಕ್ಕೆ ಒಪ್ಪದ ಆರ್ಥಿಕ ಇಲಾಖೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿ ಒಟ್ಟು 10 ಕೋಟಿ ರೂ. ಮಿತಿಯೊಳಗೆ ಸಮಾರಂಭಕ್ಕೆ ಸಲಹೆ ಮಾಡಿತ್ತು.