ಶಿವಮೊಗ್ಗ: ಕೇಂದ್ರದ ವಿರುದ್ಧ ಚಿಲ್ಲರೆ ವರ್ತಕರ ಪ್ರತಿಭಟನೆ
ಶಿವಮೊಗ್ಗ, ಅ.17: ಚಿಲ್ಲರೆಯಾಗಿ ಸಿಗರೆಟ್ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕುವ ಕೇಂದ್ರ ಸರಕಾರದ ಕಾನೂನು ವಿರೋಧಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಚಿಲ್ಲರೆ ವರ್ತಕರು, ಬೀಡಾ ಅಂಗಡಿ ಮಾಲಕರು ಪ್ರತಿಭಟನೆ ನಡೆಸಿದರು.
ಬೀಡಾ ಅಂಗಡಿ, ಸಣ್ಣಪುಟ್ಟ ಅಂಗಡಿಯಿಟ್ಟು ಕೊಂಡು ಜೀವನ ನಡೆಸುತ್ತಿದ್ದೇವೆ. ಈ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಚಿಲ್ಲರೆ
ವ್ಯಾಪಾರವೇ ಮುಖ್ಯವಾಗಿದೆ. ಇದೀಗ ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದಂತೆ ಹೊಸ ಕಾಯ್ದೆ ಜಾರಿಗೊಳಿಸಲಾಗುತ್ತಿದ್ದು, ಸಿಗರೆಟ್ ಪ್ಯಾಕೆಟ್ನ್ನು ಇಡಿಯಾಗಿ ಮಾರಾಟ ಮಾಡಬೇಕು. ಚಿಲ್ಲರೆಯಾಗಿ ಸಿಗರೆಟ್ ಮಾರಾಟ ಮಾಡಬಾರದು ಎಂಬ ನಿಯಮವು ನಮ್ಮ ಪಾಲಿಗೆ ಕರಾಳವಾಗಿ ಪರಿಣಮಿಸಲಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಸಿಗರೆಟ್-ತಂಬಾಕು ಉತ್ಪನ್ನ ಮಾರಾಟ ಮಾಡುವ ಸ್ಥಳಗಳಲ್ಲಿ ತಿಂಡಿ-ತಿನಿಸು, ಬಿಸ್ಕೇಟ್ ಪದಾರ್ಥ ಮಾರಾಟ ಮಾಡದಂತೆಯೂ ನಿರ್ಬಂಧ ಹೇರಲಾಗುತ್ತಿದೆ. ಈ ರೀತಿಯ ನಿರ್ಬಂಧಗಳು ಸಣ್ಣಪುಟ್ಟ ವ್ಯಾಪಾರದ ಮೂಲಕವೇ ಜೀವನ ನಡೆಸುತ್ತಿ ರುವ ನಮ್ಮಗೆ ಭಾರೀ ಹೊಡೆತ ನೀಡಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಹೊಸ ಕಾಯ್ದೆ ಜಾರಿಗೊಳಿಸಬಾರದು. ಕಾಯ್ದೆ ಜಾರಿಗೊಳಿಸದರೆ ಮುಂದಿನ ದಿನಗಳಲ್ಲಿ ಸಂಘಟನೆ ರಚಿಸಿಕೊಂಡು ನಿರಂತರ ಹೋರಾಟ ನಡೆಸಲಾಗುವುದು ಎಂದು ವರ್ತಕರು ಎಚ್ಚರಿಕೆ ನೀಡಿದ್ದಾರೆ.