ವಿಶ್ರಾಂತಿ ಬಳಿಕ ಹಾಂಕಾಂಗ್ ಓಪನ್ ಗೆ ಶ್ರೀಕಾಂತ್ ವಾಪಸ್
ಹೊಸದಿಲ್ಲಿ, ನ.11: ಭಾರತದ ಸ್ಟಾರ್ ಶಟ್ಲರ್ ಕೆ.ಶ್ರೀಕಾಂತ್ ಚೀನಾ ಓಪನ್ ಸೂಪರ್ ಸರಣಿಯಿಂದ ದೂರ ಉಳಿದಿದ್ದು, ವಾರದ ವಿಶ್ರಾಂತಿಯ ಬಳಿಕ ಹಾಂಕಾಂಗ್ ಓಪನ್ ಸೂಪರ್ ಸರಣಿಯಲ್ಲಿ ಆಡಲಿದ್ದಾರೆ. ಡಬ್ಲುಟಿಎ ರ್ಯಾಂಕಿಂಗ್ನಲ್ಲಿ ಪುರುಷರ ಸಿಂಗಲ್ಸ್ನಲ್ಲಿ ಪ್ರಸ್ತುತ ದ್ವಿತೀಯ ಸ್ಥಾನದಲ್ಲಿರುವ ಶ್ರೀಕಾಂತ್ಗೆ ನಂ.1 ಸ್ಥಾನಕ್ಕೇರಲು ಹಾಂಕಾಂಗ್ ಓಪನ್ ಉತ್ತಮ ವೇದಿಕೆಯಾ ಗಿದೆ. ನಾಗ್ಪುರದಲ್ಲಿ ಇತ್ತೀಚೆಗೆ ನಡೆದಿರುವ ಹಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಾಲುನೋವಿನ ಸಮಸ್ಯೆಗೆ ಒಳಗಾಗಿರುವ ಶ್ರೀಕಾಂತ್ ಒಂದು ವಾರ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.
‘‘ನಾನು ನ.14 ರಿಂದ 19ರ ತನಕ ನಡೆಯಲಿರುವ ಚೀನಾ ಓಪನ್ನಲ್ಲಿ ಭಾಗವಹಿಸುವುದಿಲ್ಲ. ನನಗೆ ನಾಗ್ಪುರದಲ್ಲಿ ಪಂದ್ಯ ಆಡುವಾಗ ಗಾಯವಾಗಿದ್ದು, ವೈದ್ಯರು ಒಂದು ವಾರ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ’’ ಎಂದು ಶ್ರೀಕಾಂತ್ ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರೀಯ ಚಾಂಪಿಯನ್ಶಿಪ್ ಫೈನಲ್ನಲ್ಲಿ ಎಚ್.ಎಸ್.ಪ್ರಣಯ್ ವಿರುದ್ಧ ಸೋತು ರನ್ನರ್ಸ್-ಅಪ್ಗೆ ತೃಪ್ತಿಪಟ್ಟುಕೊಂಡಿರುವ ಶ್ರೀಕಾಂತ್ ಅಕ್ಟೋಬರ್ 18 ರಿಂದ ಬಿಡುವಿಲ್ಲದೆ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ.