ಭಾರತ ವಿರುದ್ಧ ಟ್ವೆಂಟಿ-20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ
ಲಸಿತ್ ಮಾಲಿಂಗಗೆ ಸ್ಥಾನವಿಲ್ಲ
ಕೊಲಂಬೊ, ಡಿ.15: ಹಿರಿಯ ವೇಗದ ಬೌಲರ್ ಲಸಿತ್ ಮಾಲಿಂಗ ಭಾರತ ವಿರುದ್ಧ ಡಿ.20 ರಿಂದ ಆರಂಭವಾಗಲಿರುವ ಟ್ವೆಂಟಿ-20 ಸರಣಿಗೆ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿಲ್ಲ. ಕ್ರೀಡಾ ಸಚಿವ ದಯಸಿರಿ ಜಯಶೇಖರ ತಂಡದ ಪಟ್ಟಿಯನ್ನು ತಿದ್ದುಪಡಿ ಮಾಡಿದ್ದು, ಯಾವುದೇ ಕಾರಣ ನೀಡದೇ ಮಾಲಿಂಗರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮಾಲಿಂಗ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದಾರೆ.
ಹಿರಿಯ ಆಟಗಾರರಾದ ಸುರಂಗ ಲಕ್ಮಲ್ ಹಾಗೂ ಲಹಿರು ತಿರಿಮನ್ನೆಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವ ಫೆರ್ನಾಂಡೊ ಹಾಗೂ ದಸುನ್ ಶನಕ ಅವಕಾಶ ಪಡೆದಿದ್ದಾರೆ. ಭಾರತ-ಶ್ರೀಲಂಕಾ ನಡುವೆ ಮೊದಲ ಟ್ವೆಂಟಿ-20 ಪಂದ್ಯ ಡಿ.20 ರಂದು ಕಟಕ್ನಲ್ಲಿ ನಡೆಯಲಿದೆ. ಇಂದೋರ್ ಹಾಗೂ ಮುಂಬೈನಲ್ಲಿ ಕ್ರಮವಾಗಿ ಡಿ.22 ಹಾಗೂ 24ರಂದು ಇನ್ನೆರಡು ಪಂದ್ಯಗಳು ನಡೆಯುತ್ತವೆ.
►ಶ್ರೀಲಂಕಾ ಕ್ರಿಕೆಟ್ ತಂಡ: ತಿಸಾರ ಪೆರೇರ(ನಾಯಕ), ಉಪುಲ್ ತರಂಗ, ಆ್ಯಂಜೆಲೊ ಮ್ಯಾಥ್ಯೂಸ್, ಕುಸಾಲ್ ಪೆರೇರ, ದನುಷ್ಕಾ ಗುಣತಿಲಕ, ನಿರೊಶನ್ ಡಿಕ್ವೆಲ್ಲಾ, ಅಸೆಲಾ ಗುಣರತ್ನೆ, ಸದೀರ ಸಮರವಿಕ್ರಮ, ದಸುನ್ ಶನಕ, ಚತುರಂಗ ಡಿಸಿಲ್ವಾ, ಸಚಿತ್ ಪಠಿರನ, ಧನಂಜಯ ಡಿಸಿಲ್ವಾ, ನುವಾನ್ ಪ್ರದೀಪ್, ವಿಶ್ವ ಫೆರ್ನಾಂಡೊ, ಡಿ.ಚಾಮೀರ.