ಕರ್ನಾಟಕ ವಿರುದ್ಧ ಪಂಜಾಬ್ಗೆ ‘ಸೂಪರ್’ ಜಯ
ಸೈಯದ್ ಮುಶ್ತಾಕ್ ಅಲಿ ಟ್ರೋಪಿ
ಕೋಲ್ಕತಾ, ಜ.21: ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಸಾಹಸದ ನೆರವಿನಿಂದ ಪಂಜಾಬ್ ತಂಡ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಯಲ್ಲಿ ಕರ್ನಾಟಕ ತಂಡವಕ್ಕೆ ‘ಸೂಪರ್ ಓವರ್’ನ ಮೂಲಕ ಸೋಲುಣಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 159 ರನ್ಗಳ ಸವಾಲನ್ನು ಪಡೆದ ಪಂಜಾಬ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಪಂದ್ಯ ಟೈಗೊಂಡಿತು. ಫಲಿತಾಂಶ ನಿರ್ಧರಿಸಲು ಬಳಿಕ ನಡೆದ ಸೂಪರ್ ಓವರ್ನಲ್ಲಿ ಪಂಜಾಬ್ ಜಯ ಗಳಿಸಿತು.
ಒಂದು ಓವರ್ನ ಎಲಿಮಿನೇಟರ್ನಲ್ಲಿ ಯುವರಾಜ್ ಸಿಂಗ್ ಬೌಂಡರಿ ಹಾಗೂ ಮನ್ದೀಪ್ ಸಿಂಗ್ ಸಿಕ್ಸರ್ ನೆರವಿನಿಂದ ಪಂಜಾಬ್ 15 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕರ್ನಾಟಕ ಕೇವಲ 11 ರನ್ ಗಳಿಸಿತು. ಸಿದ್ದಾರ್ಥ್ ಕೌಲ್ ಬಿಗಿ ಬೌಲಿಂಗ್ ಮೂಲಕ ಕರ್ನಾಟಕವನ್ನು ನಿಯಂತ್ರಿಸಿದರು. ಗೆಲುವಿಗೆ 159 ರನ್ ಗುರಿ ಪಡೆದಿದ್ದ ಪಂಜಾಬ್ಗೆ ಆರಂಭಿಕ ಆಟಗಾರ ಮನ್ದೀಪ್ ಸಿಂಗ್(45,29 ಎಸೆತ) ಭದ್ರಬುನಾದಿ ಹಾಕಿಕೊಟ್ಟರು. 3ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಆಡಿದ ಹರ್ಭಜನ್ ಸಿಂಗ್ 19 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ಗಳ ಸಹಿತ 33 ರನ್ ಗಳಿಸಿದರು. ಯುವರಾಜ್ 29 ರನ್ ಕೊಡುಗೆ ನೀಡಿದರು. ಕರ್ನಾಟಕದ ಪರ ಎಸ್.ಅರವಿಂದ್(4-32) ಯಶಸ್ವಿ ಬೌಲರ್ ಎನಿಸಿಕೊಂಡರು. ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ 10 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕೇವಲ 62 ರನ್ ಗಳಿಸಿತ್ತು. ಕೊನೆಯ 10 ಓವರ್ಗಳಲ್ಲಿ ಇನ್ನೂ 96 ರನ್ ಗಳಿಸಿ ಪಂಜಾಬ್ಗೆ ಸವಾಲಿನ ಮೊತ್ತ ನೀಡಿತು. ಪಂಜಾಬ್ನ ಮನ್ಪ್ರೀತ್ ಸಿಂಗ್ ಗೋನಿ 8 ರನ್ಗೆ 2 ವಿಕೆಟ್ ಉಡಾಯಿಸಿದರು. ಬಲ್ಜೇತ್ ಸಿಂಗ್(3-21) ಯಶಸ್ವಿ ಬೌಲರ್ ಎನಿಸಿಕೊಂಡರು. ಕರ್ನಾಟಕದ ಬ್ಯಾಟಿಂಗ್ನಲ್ಲಿ ಅನಿರುದ್ಧ್ ಜೋಶಿ(40,19 ಎಸೆತ), ಸಿಎಂ ಗೌತಮ್(36) ಎರಡಂಕೆಯ ಸ್ಕೋರ್ ದಾಖಲಿಸಿದರು.