ಬಿಸಿಸಿಐನ ‘ಒಂದು ರಾಜ್ಯ- ಒಂದು ವೋಟ್ ನಿರ್ಧಾರ ಮರು ಪರಿಶೀಲನೆಗೆ ಸುಪ್ರೀಂ ಅಸ್ತು
ಹೊಸದಿಲ್ಲಿ, ಮೇ 1: ಭಾರತೀತ ಕ್ರಿಕೆಟ್ ಮಂಡಳಿಯ(ಬಿಸಿಸಿಐ) ‘ಒಂದು ರಾಜ್ಯ- ಒಂದು ವೋಟ್ ‘ ವಿಚಾರದ ಬಗ್ಗೆ ತನ್ನ ನಿರ್ಧಾರ ವನ್ನು ಪುನರ್ ಪರಿಶೀಲಿಸಲು ಸುಪ್ರೀಂ ಕೋರ್ಟ್ ಇಂದು ಒಪ್ಪಿಕೊಂಡಿದೆ
ಲೋಧಾ ಸಮಿತಿಯ ಶಿಫಾರಸ್ಸಿನಂತೆ ಒಂದು ರಾಜ್ಯ ಒಂದು ಮತದ ಹಕ್ಕಿನಡಿಯಲ್ಲಿ ಚುನಾವಣೆ ನಡೆಸಬೇಕು ಎಂದು ಸಿಒಎ ತನ್ನ ವಸ್ತುಸ್ಥಿತಿ ವರದಿಯಲ್ಲಿ ಹೇಳಿತ್ತು. ಇದರ ಬಗ್ಗೆ ಬಿಸಿಸಿಐ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಮಂಗಳವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಒಂದು ರಾಜ್ಯ- ಒಂದು ವೋಟ್ ನಿರ್ಧಾರ ಮರು ಪರಿಶೀಲನೆ ಮಾಡುವುದಾಗಿ ಹೇಳಿದೆ.
ಇದೇ ವೇಳೆ ಬಿಸಿಸಿಐನ ಸಂವಿಧಾನ ಅಂತಿಮಗೊಳ್ಳುವ ತನಕ ಯಾವುದೇ ರಾಜ್ಯ ಕ್ರಿಕೆಟ್ ಮಂಡಳಿಗಳೂ ಚುನಾವಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಏಳನೇ ಸ್ಥಿತಿಗತಿ ವರದಿಯಲ್ಲಿ ತಿಳಿಸಿದೆ.
ಇದೇ ವೇಳೆ ಬಿಸಿಸಿಐ ಸಮಿತಿಗೆ ಆಯ್ಕೆಯಾಗುವವರು ಕಡ್ಡಾಯವಾಗಿ ಟೆಸ್ಟ್ ಕ್ರಿಕೆಟ್ ಆಡಿರಬೇಕು ಎಂಬ ಅರ್ಹತೆಯನ್ನು ನಿಗದಿಪಡಿಸಿ ತನ್ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ.
ಹಾಲಿ ಇರುವ ಬಿಸಿಸಿಐ ನಿಯೋಜಿತ ಅಧ್ಯಕ್ಷ ಸಿ.ಕೆ ಖನ್ನಾ, ನಿಯೋಜಿತ ಕಾರ್ಯದರ್ಶಿ ಅಮಿತಾಬ್ ಚೌದರಿ, ಖಜಾಂಚಿ ಅನಿರುದ್ಧ್ ಚೌದರಿ ಅವರ ಅಧಿಕಾರದ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಿ ಬಿಸಿಸಿಐ ಪದಾಧಿಕಾರಿಗಳ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿಂದ ನೇಮಕವಾಗಿದ್ದ ಬಿಸಿಸಿಐನ ನಿರ್ವಾಹಕ ಸಮಿತಿಯ ಸದಸ್ಯರಾದ ವಿನೋದ್ ರಾಯ್ ಮತ್ತು ಡಯಾನ ಎಡುಲ್ಜಿ ಅವರು ಶಿಫಾರಸ್ಸು ಮಾಡಿದ್ದರು. ಆದರೆ ಬಿಸಿಸಿಐನ ಸಂವಿಧಾನ ಅಂತಿಮಗೊಳ್ಳುವ ತನಕ ಇದು ಸಾಧ್ಯವಿಲ್ಲ ಎಂದು ಹೇಳಿದೆ.