ಕೋಲ್ಕತಾಕ್ಕೆ ಪಂಜಾಬ್ ವಿರುದ್ಧ ನಿರ್ಣಾಯಕ ಪಂದ್ಯ
ಇಂದೋರ್, ಮೇ 11: ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ-3ರಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಗುರಿ ಹಾಕಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಶನಿವಾರ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಉಭಯ ತಂಡಗಳು ಸೋಲಿನೊಂದಿಗೆ ಇಲ್ಲಿಗೆ ಬಂದಿವೆ. ಐಪಿಎಲ್ನಲ್ಲಿ ಪ್ಲೇ-ಆಫ್ ಹಂತಕ್ಕೇರಲು ಎರಡೂ ತಂಡಗಳಿಗೆ ಗೆಲುವು ಮುಖ್ಯವಾಗಿದೆ. 12 ಅಂಕ ಗಳಿಸಿರುವ ಪಂಜಾಬ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 10 ಅಂಕ ಹೊಂದಿರುವ ಕೋಲ್ಕತಾ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಕೋಲ್ಕತಾ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು. ರೋಹಿತ್ ಶರ್ಮ ನೇತೃತ್ವದ ಮುಂಬೈ ತಂಡ ಕೋಲ್ಕತಾವನ್ನು 102 ರನ್ಗಳ ಅಂತರದಿಂದ ಹೀನಾಯವಾಗಿ ಸೋಲಿಸಿತ್ತು. ಪಂಜಾಬ್ ಕೂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 15 ರನ್ಗಳಿಂದ ಸೋಲುಂಡಿತ್ತು.
ಪಂಜಾಬ್ ತಂಡ ಬ್ಯಾಟಿಂಗ್ನಲ್ಲಿ ಆರಂಭಿಕ ಆಟಗಾರರಾದ ಕ್ರಿಸ್ ಗೇಲ್ ಹಾಗೂ ಲೋಕೇಶ್ ರಾಹುಲ್ರನ್ನು ಹೆಚ್ಚು ಅವಲಂಬಿಸಿದೆ. ಈ ಇಬ್ಬರು ಕ್ರಮವಾಗಿ ಒಟ್ಟು 471 ಹಾಗೂ 311 ರನ್ ಗಳಿಸಿದ್ದಾರೆ.
ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ರಾಹುಲ್ ಹೊರತುಪಡಿಸಿ ಪಂಜಾಬ್ನ ಎಲ್ಲ ದಾಂಡಿಗರು ರನ್ ಗಳಿಸಲು ವಿಫಲರಾಗಿದ್ದರು. ರಾಹುಲ್ 70 ಎಸೆತಗಳಲ್ಲಿ ಔಟಾಗದೆ 95 ರನ್ ಗಳಿಸಿದ್ದರು.
ಪಂಜಾಬ್ ಈ ವರ್ಷದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಆರಂಭಿಕ ಆಟಗಾರರು ಪ್ರಮುಖ ಕಾರಣ. ಗೇಲ್ ಹಾಗೂ ರಾಹುಲ್ ಹಲವು ಬಾರಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿದ್ದಾರೆ.
ಕರುಣ್ ನಾಯರ್ 9 ಇನಿಂಗ್ಸ್ಗಳಲ್ಲಿ 243 ರನ್ ಗಳಿಸಿ ತಂಡದ ಗೆಲುವಿನಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಆದರೆ, ಅನುಭವಿ ಆಟಗಾರ ಯುವರಾಜ್ ಸಿಂಗ್, ಆ್ಯರೊನ್ ಫಿಂಚ್ ಹಾಗೂ ಮಯಾಂಕ್ ಅಗರ್ವಾಲ್ ಮಧ್ಯಮ ಕ್ರಮಾಂಕದಲ್ಲಿ ಇನ್ನಷ್ಟೇ ಮಿಂಚಬೇಕಾಗಿದೆ.
ಈ ಮೂವರು ಆಟಗಾರರ ಕಳಪೆ ಪ್ರದರ್ಶನ ತಂಡದ ಆಡಳಿತಕ್ಕೆ ತೀವ್ರ ಚಿಂತೆಯ ವಿಷಯವಾಗಿದೆ. ಬೌಲಿಂಗ್ ವಿಭಾಗದಲ್ಲಿ ನಾಯಕ ರವಿಚಂದ್ರನ್ ಅಶ್ವಿನ್ ಹಾಗೂ ಮಧ್ಯಮ ವೇಗದ ಬೌಲರ್ ಮೋಹಿತ್ ಶರ್ಮ ಎದುರಾಳಿ ತಂಡಕ್ಕೆ ಸವಾಲಾಗುತ್ತಿದ್ದಾರೆ. ವೇಗದ ಬೌಲರ್ಗಳಾದ ಬರಿಂದರ್ ಸ್ರಾನ್ ಹಾಗೂ ಆ್ಯಂಡ್ರೂ ಟೈ, ಅಫ್ಘಾನ್ ಸ್ಪಿನ್ನರ್ ಮುಜೀಬ್ ಉರ್ ರಹ್ಮಾನ್ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.
ಆಸ್ಟ್ರೇಲಿಯದ ಟೈ 8 ಪಂದ್ಯಗಳಲ್ಲಿ 7.77ರ ಇಕಾನಮಿ ರೇಟ್ನಲ್ಲಿ ಒಟ್ಟು 16 ವಿಕೆಟ್ಗಳನ್ನು ಉರುಳಿಸಿದ್ದಾರೆ. ವೇಗದ ಬೌಲರ್ ಅಂಕಿತ್ ರಾಜ್ಪೂತ್ ಹಾಗೂ ರಹ್ಮಾನ್ ತಲಾ 8 ಹಾಗೂ 14 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಮತ್ತೊಂದೆಡೆ, ಕೋಲ್ಕತಾ ತಂಡ ಪ್ಲೇ-ಆಫ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದರೆ ಮುಂಬೈ ವಿರುದ್ಧ ಹೀನಾಯ ಸೋಲನ್ನು ಮರೆತು ಸಂಘಟಿತ ಪ್ರದರ್ಶನ ನೀಡಬೇಕಾಗಿದೆ. ಕೋಲ್ಕತಾ ತಂಡ ಮುಂಬೈ ವಿರುದ್ಧ ಪಂದ್ಯದಲ್ಲಿ ಐಪಿಎಲ್ ಟ್ವೆಂಟಿ-20 ಲೀಗ್ ಇತಿಹಾಸದಲ್ಲಿ ಭಾರೀ ಅಂತರದ ಸೋಲನ್ನು ಕಂಡಿದೆ. ಆರಂಭಿಕ ಆಟಗಾರರಾದ ಕ್ರಿಸ್ ಲಿನ್ ಹಾಗೂ ಸುನೀಲ್ ನರೇನ್ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ನಾಯಕ ದಿನೇಶ್ ಕಾರ್ತಿಕ್ ಮಾತ್ರ ಕೆಕೆಆರ್ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ತಮಿಳುನಾಡಿನ ಕಾರ್ತಿಕ್ 11 ಪಂದ್ಯಗಳಲ್ಲಿ ಒಟ್ಟು 321 ರನ್ ಕಲೆ ಹಾಕಿದ್ದಾರೆ.
ಕೋಲ್ಕತಾದ ಬೌಲಿಂಗ್ ವಿಭಾಗ ಸ್ಪಿನ್ನರ್ಗಳನ್ನು ಹೆಚ್ಚು ನೆಚ್ಚಿ ಕೊಂಡಿದೆ. ನರೇನ್ ಹೊರತುಪಡಿಸಿ ಉಳಿದೆಲ್ಲಾ ಬೌಲರ್ಗಳು ಮುಂಬೈ ವಿರುದ್ಧ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ 11 ಪಂದ್ಯಗಳಲ್ಲಿ 8 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದರೆ, ಯಾದವ್ ಪಂಜಾಬ್ ವಿರುದ್ಧ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ.
ಲೆಗ್-ಸ್ಪಿನ್ನರ್ ಪಿಯೂಷ್ ಚಾವ್ಲಾ ಮುಂಬೈ ವಿರುದ್ಧ 44 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದರು.