ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ: ಅರ್ಜೆಂಟೀನಕ್ಕೆ ಆಘಾತ ನೀಡಿದ ಭಾರತ
ಬ್ರೆಡಾ(ಅರ್ಜೆಂಟೀನ), ಜೂ.24: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಅಜೇಯ ಓಟವನ್ನು ಮುಂದುವರಿಸಿದೆ. ರವಿವಾರ ನಡೆದ ತನ್ನ ಎರಡನೇ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನವನ್ನು 2-1 ಅಂತರದಿಂದ ಮಣಿಸಿ ಶಾಕ್ ನೀಡಿದೆ.
ಭಾರತದ ಪರ ಹರ್ಮನ್ಪ್ರೀತ್ ಸಿಂಗ್(17ನೇ ನಿಮಿಷ) ಪೆನಾಲ್ಟಿ ಕಾರ್ನರ್ನ್ನು ಗೋಲಾಗಿ ಪರಿವರ್ತಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ಮನ್ದೀಪ್ ಸಿಂಗ್ 28ನೇ ನಿಮಿಷದಲ್ಲಿ ಗೋಲು ಬಾರಿಸುವುದರೊಂದಿಗೆ 2-0 ಮುನ್ನಡೆ ಒದಗಿಸಿದರು.
ವಿಶ್ವದ ನಂ.2ನೇ ತಂಡ ಅರ್ಜೆಂಟೀನದ ಪರ ಡ್ರಾಗ್ಫ್ಲಿಕರ್ ಗೊಂಝಾಲೊ ಪೆಲ್ಲಟ್ 30ನೇ ನಿಮಿಷದಲ್ಲಿ ಏಕೈಕ ಗೋಲು ಹೊಡೆದರು.
ಭಾರತ ಶನಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 4-0 ಅಂತರದಿಂದ ಸೋಲಿಸಿತ್ತು. ಸತತ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ 6 ತಂಡಗಳಿರುವ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಜಯಿಸುವ ವಿಶ್ವಾಸ ಮೂಡಿಸಿದೆ.
8 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಭಾರತ ಜೂ.27 ರಂದು ನಡೆಯಲಿರುವ ತನ್ನ 3ನೇ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಸವಾಲನ್ನು ಎದುರಿಸಲಿದೆ.