1984ರಲ್ಲಿ ಒಲಿಂಪಿಕ್ಸ್ ನಲ್ಲಿ ಗಂಜಿಯೂಟ, ಉಪ್ಪಿನಕಾಯಿ ನೀಡಲಾಗಿತ್ತು :ಉಷಾ
ಹೊಸದಿಲ್ಲಿ, ಆ.16: ಮೂವತ್ತನಾಲ್ಕು ವರ್ಷಗಳ ಹಿಂದೆ ಲಾಸ್ ಏಂಜಲೀಸ್ನಲ್ಲಿ ನಡೆದ ಒಲಿಂಪಿಕ್ಸ್ ಗ್ರಾಮದಲ್ಲಿ ತಮಗೆ ಗಂಜಿಯೂಟ, ಉಪ್ಪಿನಕಾಯಿ ನೀಡಲಾಗಿತ್ತು.ಈ ಕಾರಣದಿಂದಾಗಿ ಕಂಚು ತಪ್ಪಿತು ಎಂದು ಭಾರತದ ಓಟದ ರಾಣಿ ಖ್ಯಾತಿಯ ಪಿ.ಟಿ.ಉಷಾ ಹೇಳಿದ್ದಾರೆ.
1984, ಆ.8ರಂದು ನಡೆದ ಒಲಿಂಪಿಕ್ಸ್ನ 400 ಮೀಟರ್ ಸ್ಪರ್ಧೆಯ ಮೊದಲು ಯಾವುದೇ ಪೌಷ್ಟಿಕಾಂಶ ನೀಡಲಿಲ್ಲ. ಗಂಜಿ ಯೂಟ ಮತ್ತು ಉಪ್ಪಿನ ಕಾಯಿ ಸೇವಿಸಿದ ಹಿನ್ನೆಲೆಯಲ್ಲಿ ಓಟದಲ್ಲಿ ಹಿನ್ನಡೆಯಾಗಿತ್ತು. ಒಲಿಂಪಿಕ್ಸ್ನ 400 ಮೀಟರ್ ಹರ್ಡಲ್ಸ್ನಲ್ಲಿ ಕೇವಲ 1 ಸೆಕೆಂಡ್ ಅಂತರದಲ್ಲಿ ಕಂಚು ತಪ್ಪಿತು ಎಂದು ಪಿ.ಟಿ.ಉಷಾ ಅಂದಿನ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ರೊಮೇನಿಯಾದ ಕ್ರಿಸ್ಟಿಯಾನಾ ಕೊಜೊಕಾರೊ (55.41 ಸೆ.) ಕಂಚು ಪಡೆದರು. ಆದರೆ ಪಿ.ಟಿ.ಉಷಾ (55.42 ಸೆ.) ನಾಲ್ಕನೇ ಸ್ಥಾನ ಪಡೆದರು. ಟ್ರಾಕ್ ಆ್ಯಂಡ್ ಫೀಲ್ಡ್ನಲ್ಲಿ ಉಷಾ 18 ವರ್ಷಗಳ ಕಾಲ ಭಾರತಕ್ಕೆ ಪದಕಗಳನ್ನು ತಂದು ಕೊಟ್ಟಿದ್ದರು.ಇದೀಗ ಅವರು ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಎಂಬ ಹೆಸರಿನ ಕೋಚಿಂಗ್ ಅಕಾಡಮಿಯನ್ನು ನಡೆಸುತ್ತಿದ್ದಾರೆ.
ಮಲಯಾಳಂನಲ್ಲಿ ‘ಕಡು ಮಾಂಙ ಅಚಾರ್’ (ಮಿಡಿ ಮಾವಿನ ಉಪ್ಪಿನಕಾಯಿ) ಸೇವಿಸಿದ ಹಿನ್ನೆಲೆಯಲ್ಲಿ ಪದಕ ತಪ್ಪಿತು. 400 ಮೀಟರ್ ಹರ್ಡಲ್ಸ್ನಲ್ಲಿ ಮೊದಲ 45 ಮೀಟರ್ ದೂರವನ್ನು 6.2 ಸೆಕೆಂಡ್ಗಳಲ್ಲಿ ತಲುಪಿದ್ದೆ ಬಳಿಕ ವೇಗ ಕಡಿಮೆ ಯಾಯಿತು. ಕೊನೆಯ 35 ಮೀಟರ್ ಗುರಿಯನ್ನು ತಲುಪುವಷ್ಟರಲ್ಲಿ ಸಮಸ್ಯೆ ಎದುರಿಸಬೇಕಾಯಿತು ಎಂದು ಹಿಂದಿನ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಮೊರಾಕ್ಕೊದ ನವಾಲ್ ವೌಟಾವಾಕಲ್ ಚಿನ್ನ ಮತ್ತು ಸ್ವೀಡನ್ನ ಅನ್ ಲೌಯಿಸೆ ಬೆಳ್ಳಿ ಪಡೆದರು. ಭಾರತಕ್ಕೆ ಅಂದು ಪದಕ ತಪ್ಪಿದ್ದರೂ ಉಷಾ ಈಗಲೂ ಪದಕ ತಂದು ಕೊಡುಗೆ ನೀಡುವ ಹೋರಾಟದಲ್ಲಿ ಹಿಂದೆ ಸರಿದಿಲ್ಲ. ಕೋಚಿಂಗ್ ಕೇಂದ್ರ ಪ್ರಾರಂಭಿಸಿ ಅಥ್ಲೀಟ್ಗಳಿಗೆ ತರಬೇತಿ ನೀಡುತ್ತಿದ್ದಾರೆ. ಅವರ ಅಕಾಡಮಿಯಲ್ಲಿ 18 ಬಾಲಕಿಯರು ತರಬೇತಿ ಪಡೆಯುತ್ತಿದ್ದಾರೆ.