ಕ್ವಾರ್ಟರ್ ಫೈನಲ್ನಲ್ಲಿ ಎಡವಿದ ಶ್ರೀಕಾಂತ್
ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯ
► ಜಪಾನ್ ಓಪನ್
ಟೋಕಿಯೊ, ಸೆ.14: ಕಿಡಂಬಿ ಶ್ರೀಕಾಂತ್ 700,000 ಯುಎಸ್ ಡಾಲರ್ ಬಹುಮಾನ ಮೊತ್ತದ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಪುರುಷರ ಸಿಂಗಲ್ಸ್ನಲ್ಲಿ ಸೋತು ಹೊರ ನಡೆದಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಭಾರತದ ಆಟಗಾರರ ಹೋರಾಟಕ್ಕೆ ತೆರೆ ಬಿದ್ದಿದೆ.
ಇಲ್ಲಿ ಶುಕ್ರವಾರ ಒಂದು ಗಂಟೆ, 19 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ 7ನೇ ಶ್ರೇಯಾಂಕದ ಶ್ರೀಕಾಂತ್ ಕೊರಿಯಾದ ಲೀ ಡಾಂಗ್ ಕಿಯುನ್ ವಿರುದ್ಧ 21-19, 16-21, 18-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಹಾಂಕಾಂಗ್ನ ವಾಂಗ್ ವಿಂಗ್ ಕಿ ಅವರನ್ನು ನೇರ ಗೇಮ್ಗಳಿಂದ ಸೋಲಿಸಿ ಏಶ್ಯನ್ ಗೇಮ್ಸ್ನ ಸೋಲಿಗೆ ಸೇಡು ತೀರಿಸಿಕೊಂಡಿದ್ದರು. ಇದೀಗ ಶ್ರೀಕಾಂತ್ ಸೋಲಿನೊಂದಿಗೆ ಜಪಾನ್ ಓಪನ್ನಲ್ಲಿ ಭಾರತದ ಶಟ್ಲರ್ಗಳ ಅಭಿಯಾನ ಕೊನೆಗೊಂಡಂತಾಗಿದೆ. ಏಶ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಎಚ್.ಎಸ್. ಪ್ರಣಯ್ ಗುರುವಾರ ನಡೆದ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು.
ಪುರುಷರ ಡಬಲ್ಸ್ನಲ್ಲಿ ಭಾರತದ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಪ್ರಿ-ಕ್ವಾರ್ಟರ್ ಫೈನಲ್ ಹಂತ ದಾಟಲು ವಿಫಲರಾಗಿದ್ದಾರೆ.