ಅರ್ಜುನ್ ತೆಂಡುಲ್ಕರ್ಗೆ ಐದು ವಿಕೆಟ್ ಗೊಂಚಲು
ಕೂಚ್ ಬಿಹಾರ್ ಟ್ರೋಫಿ
ಹೊಸದಿಲ್ಲಿ, ನ.21: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಬುಧವಾರ ನಡೆದ ಅಂಡರ್-19 ಕೂಚ್ ಬಿಹಾರ್ ಟ್ರೋಫಿ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಕಬಳಿಸುವ ಮೂಲಕ ಬೌಲಿಂಗ್ನಲ್ಲಿ ಮಿಂಚಿದ್ದಾರೆ. ಮುಂಬೈ ತಂಡವನ್ನು ಪ್ರತಿನಿಧಿಸಿದ ತೆಂಡುಲ್ಕರ್ 98 ರನ್ಗೆ 5 ವಿಕೆಟ್ಗಳನ್ನು ಪಡೆದರು. ದಿಲ್ಲಿ ತಂಡ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಮೂರನೇ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್ನಲ್ಲಿ 394 ರನ್ಗೆ 9 ವಿಕೆಟ್ ಕಳೆದುಕೊಳ್ಳಲು ಕಾರಣರಾಗಿದ್ದಾರೆ. ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟಿದ್ದ ಮುಂಬೈ ಮೊದಲ ಇನಿಂಗ್ಸ್ನಲ್ಲಿ 453 ರನ್ ಗಳಿಸಿತ್ತು. ಆರಂಭಿಕ ಆಟಗಾರ ದಿವ್ಯಾಂಶ್ ದ್ವಿಶತಕ(211) ಗಳಿಸಿದ್ದರು. ದಿಲ್ಲಿ ಈಗಲೂ ಮುಂಬೈಗಿಂತ 59 ರನ್ ಹಿನ್ನಡೆಯಲ್ಲಿದೆ.
ಅರ್ಜುನ್ ಎದುರಾಳಿ ತಂಡದ ನಾಯಕ ಆಯುಷ್ ಬಡೋನಿ, ವೈಭವ್, ವಿಕೆಟ್ಕೀಪರ್ ಗುಲ್ಝರ್ ಸಿಂಗ್, ಹೃತಿಕ್ ಶೋಕೀನ್ ಹಾಗೂ ಪ್ರಶಾಂತ್ ಕುಮಾರ್ ವಿಕೆಟ್ಗಳನ್ನು ಉರುಳಿಸಿದ್ದಾರೆ. ಈ ಹಿಂದೆ ಅರ್ಜುನ್ ಲಂಡನ್ ಹಾಗೂ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತದ ಸೀನಿಯರ್ ಕ್ರಿಕೆಟ್ ತಂಡದ ನೆಟ್ಗಳಲ್ಲಿ ಬೌಲಿಂಗ್ ಮಾಡಿ ಅಭ್ಯಾಸ ನಡೆಸಿದ್ದರು.