ಭಾರತ ಮಹಿಳಾ ಕೋಚ್ ಆಯ್ಕೆಗೆ ಸಮಿತಿ ರಚನೆ: ಪೊವಾರ್ ಆಯ್ಕೆಗೆ ಎಡುಲ್ಜಿ ಒಲವು
ಮುಂಬೈ, ಡಿ.11: ಭಾರತ ಮಹಿಳಾ ತಂಡದ ಕೋಚ್ ಹುದ್ದೆಗೆ ವೆಬ್ಸೈಟ್ನಲ್ಲಿ ಜಾಹೀರಾತು ನೀಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸುಪ್ರೀಂಕೋರ್ಟಿನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿ ಸಮಿತಿ ಸೂಕ್ತ ಅಭ್ಯರ್ಥಿ ಆಯ್ಕೆಗೆ ಹಂಗಾಮಿ ಸಮಿತಿಯೊಂದನ್ನು ರಚಿಸಿದೆ. ಹಂಗಾಮಿ ಸಮಿತಿಯ ಮೂವರು ಸದಸ್ಯರಾದ ಭಾರತದ ಮಾಜಿ ನಾಯಕ ಕಪಿಲ್ದೇವ್, ಮಾಜಿ ಆರಂಭಿಕ ಆಟಗಾರ ಅಂಶುಮಾನ್ ಗಾಯಕ್ವಾಡ್ ಹಾಗೂ ಮಾಜಿ ಮಹಿಳಾ ಕ್ರಿಕೆಟ್ ತಾರೆ ಶಾಂತಾ ರಾಮಸ್ವಾಮಿಗೆ ಸೋಮವಾರ ಸಿಒಎ ಅಧ್ಯಕ್ಷ ವಿನೋದ್ ರಾಯ್ ಇ-ಮೇಲ್ ಕಳುಹಿಸಿದ್ದಾರೆ. ಆದರೆ, ರಾಯ್ ಅವರ ಸಿಒಎ ಸಹೋದ್ಯೋಗಿ ಡಯಾನಾ ಎಡುಲ್ಜಿ ಇದಕ್ಕೆ ಅಡ್ಡಗಾಲು ಹಾಕಿದ್ದು, ರಮೀಶ್ ಪೊವಾರ್ರನ್ನು ಮಹಿಳಾ ತಂಡದ ಕೋಚ್ರನ್ನಾಗಿ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಬಯಸಿದಂತೆ ರವಿ ಶಾಸ್ತ್ರಿ ಅವರನ್ನು ಟೀಮ್ ಇಂಡಿಯಾದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಹಾಗಿರುವಾಗ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಆಯ್ಕೆಯಾಗಿರುವ ಪೊವಾರ್ರನ್ನು ತಂಡದಲ್ಲಿ ಮುಂದುವರಿಸಬಾರದೇಕೆ?ಎಂದು ಅವರು ಪ್ರಶ್ನಿಸಿದ್ದಾರೆ.
ದೇವ್, ಗಾಯಕ್ವಾಡ್ ಹಾಗೂ ರಂಗಸ್ವಾಮಿ ಅವರನ್ನೊಳಗೊಂಡ ಸಮಿತಿಯು ಲಭ್ಯವಿರುವ ಅಭ್ಯರ್ಥಿಯನ್ನು ಮಹಿಳಾ ತಂಡದ ಕೋಚ್ ಹುದ್ದೆಗೆ ಆಯ್ಕೆ ಮಾಡುವುದನ್ನು ರಾಯ್ ನಿರೀಕ್ಷಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಎಡುಲ್ಜಿ ಪ್ರಕಾರ, ಸಿಒಎಗೆ ಹಂಗಾಮಿ ಸಮಿತಿ ರಚಿಸುವ ಅರ್ಹತೆಯಿಲ್ಲ. ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ಸಿಒಎಗೆ ಕಳುಹಿಸಿರುವ ಇ-ಮೇಲ್ನಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದ್ದು ಅದು ಮಾಧ್ಯಮಗಳಲ್ಲಿ ಸೋರಿಕೆಯಾಗಿತ್ತು. ‘ಯಾವ ನೆಲೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ’ಎಂದು ಚೌಧರಿ ಇ-ಮೇಲ್ ಮೂಲಕ ಸಿಒಎಯನ್ನು ಪ್ರಶ್ನಿಸಿದ್ದರು.