ಪಾಂಡ್ಯ ವಿವಾದ ತಂಡದ ಮೇಲೆ ಪರಿಣಾಮ ಬೀರದು
ವಿರಾಟ್ ಕೊಹ್ಲಿ ವಿಶ್ವಾಸ
ಸಿಡ್ನಿ, ಜ.11: ಟಿವಿ ಕಾರ್ಯಕ್ರಮವೊಂದರಲ್ಲಿ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಡಿದ ಮಾತುಗಳು ವಿವಾದಕ್ಕೀಡಾಗುತ್ತಿದ್ದಂತೆ ಭಾರತ ಕ್ರಿಕೆಟ್ ತಂಡ ಈ ವಿವಾದದಿಂದ ಅಂತರ ಕಾಯ್ದುಕೊಳ್ಳಲು ಬಯಸಿದೆ.
ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ಭಾರತ ಶನಿವಾರ ಮೊದಲ ಏಕದಿನ ಪಂದ್ಯವಾಡಲಿದ್ದು, ಈ ಕುರಿತು ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ತಂಡದ ನಾಯಕ ಕೊಹ್ಲಿ,‘‘ ಭಾರತ ತಂಡದ ಹಿತದೃಷ್ಟಿಯಿಂದ ಪಾಂಡ್ಯ ಆಡಿರುವ ಅನುಚಿತ ಮಾತುಗಳನ್ನು ನಾವು ಖಂಡಿತವಾಗಿ ಬೆಂಬಲಿಸುವುದಿಲ್ಲ. ಅವು ಸ್ವೀಕಾರಾರ್ಹವಲ್ಲ. ತಾವು(ಪಾಂಡ್ಯ ಹಾಗೂ ರಾಹುಲ್) ಆಡಿದ ಮಾತುಗಳ ಪರಿಣಾಮ ಏನಾಗಿದೆ ಎಂಬುದು ಅವರಿಗೆ ತಿಳಿದಿದೆ’’ ಎಂದು ಹೇಳಿದ್ದಾರೆ.
ಅವರು ಆಡಿರುವ ನುಡಿಗಳು ಅವರ ಕೈ ಮೀರಿವೆ ಎಂಬ ಅರಿವು ಪಾಂಡ್ಯ ಮತ್ತು ರಾಹುಲ್ಗಿದೆ ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.
ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪಾಂಡ್ಯ ಮಹಿಳೆಯರ ಕುರಿತು ಅಸಭ್ಯ ಮಾತುಗಳನ್ನಾಡಿದ್ದರು. ಈ ಮಾತುಗಳಿಗೆ ಎಲ್ಲೆಡೆಯಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.