‘ಬಹರೆನ್ ವಿರುದ್ಧ ಭಾರತ ಪುಟಿದೇಳಲಿದೆ’
ಫುಟ್ಬಾಲ್ ಕೋಚ್ ಕಾನ್ಸ್ಟಂಟೈನ್
ಅಬುಧಾಬಿ, ಜ.11: ಭಾರತ ತಂಡ ಮುಂಬರುವ ಬಹರೈನ್ ವಿರುದ್ಧದ ಪಂದ್ಯಕ್ಕೆ ಸಂಘಟಿತವಾಗಿ ತಯಾರಾಗಬೇಕಿದೆ ಎಂದು ಫುಟ್ಬಾಲ್ ತಂಡದ ಕೋಚ್ ಸ್ಟೀಫನ್ ಕಾನ್ಸ್ಟಂಟೈನ್ ಹೇಳಿದ್ದಾರೆ. ‘ಬ್ಲೂ ಟೈಗರ್ಸ್’ ತಂಡ ಏಶ್ಯಕಪ್ ಟೂರ್ನಿಯಲ್ಲಿ ಮತ್ತೊಂದು ಗೆಲುವು ಸಾಧಿಸಿ ನಾಕೌಟ್ ಹಂತಕ್ಕೆ ಪ್ರವೇಶಿಸುವ ಒತ್ತಡದಲ್ಲಿದೆ.
ಆರಂಭಿಕ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಭರ್ಜರಿ ಜಯ ಗಳಿಸಿದ್ದ ಭಾರತ ತಂಡ, ತನ್ನ ಎರಡನೇ ಪಂದ್ಯದಲ್ಲಿ ಯುಎಇ ವಿರುದ್ಧ ಸೋಲು ಅನುಭವಿಸಿತ್ತು.
‘‘ಮುಂದಿನ ಪಂದ್ಯಕ್ಕೆ ಉತ್ಸಾಹದಿಂದ ಸಿದ್ಧವಾಗಬೇಕಿದೆ. ನಾವು ಗೆಲುವಿನ ಗುರಿಯನ್ನೇ ಮುಂದಿಟ್ಟುಕೊಂಡು ಆಡಬೇಕು ಹಾಗೂ ಪಂದ್ಯದಿಂದ ಹೊಸದು ಏನಾದರೂ ಕಲಿಯಬೇಕು. ನಾಕೌಟ್ಗೆ ಅರ್ಹ ಫಲಿತಾಂಶವನ್ನು ಪಡೆಯುವ ವಿಶ್ವಾಸವಿದೆ’’ ಎಂದು ಕಾನ್ಸ್ಟಂಟೈನ್ ಹೇಳಿದ್ದಾರೆ. ಎ ಗುಂಪಿನ ತಮ್ಮ ಕೊನೆಯ ಪಂದ್ಯದಲ್ಲಿ ಭಾರತದ ಆಟಗಾರರು ಸೋಮವಾರ ಬಹರೈನ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಅಗ್ರ 16ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಲಿದೆ.
ಕಾನ್ಸ್ಟಂಟೈನ್ ಮಾತುಗಳನ್ನೇ ಪ್ರತಿಧ್ವನಿಸಿರುವ ತಂಡದ ನಾಯಕ ಸುನೀಲ್ ಚೆಟ್ರಿ, ‘‘ನಾವು ಇನ್ನೂ ಸ್ಪರ್ಧೆಯಲ್ಲಿದ್ದೇವೆ, ಬಹರೈನ್ ತಂಡವನ್ನು ಎದುರಿಸಲು ಸಕಲ ಸಿದ್ಧತೆ ನಡೆದಿದೆ. ನಮ್ಮ ತಂಡದ ಒಗ್ಗಟ್ಟೇ ಗೆಲುವಿಗೆ ಸೋಪಾನವಾಗಲಿದೆ’’ ಎಂದು ಹೇಳಿದರು.