ಭಾರತ ವಿಶ್ವಕಪ್ ಆತಿಥ್ಯ ಕಳೆದುಕೊಳ್ಳುವ ಅಪಾಯವಿಲ್ಲ: ಐಸಿಸಿ ಸ್ಪಷ್ಟನೆ
ಹೊಸದಿಲ್ಲಿ, ಜ.31: ತೆರಿಗೆ ವಿನಾಯಿತಿ ವಿವಾದದ ಹೊರತಾಗಿಯೂ ಭಾರತ 2021ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ವಿಶ್ವಕಪ್ ಆತಿಥ್ಯದ ಹಕ್ಕನ್ನು ಕಳೆದುಕೊಳ್ಳುವ ಅಪಾಯವಿಲ್ಲ ಎಂದು ಐಸಿಸಿ ಸಿಇಒ ಡೇವಿಡ್ ರಿಚರ್ಡ್ಸನ್ ಗುರುವಾರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎರಡು ಪ್ರಮುಖ ಟೂರ್ನಿಯ ಕುರಿತ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಭಾರತ 2016ರ ಟ್ವೆಂಟಿ-20 ವಿಶ್ವಕಪ್ನ್ನು ಆಯೋಜಿಸಿದ್ದಾಗ ಕೇಂದ್ರ ಸರಕಾರ ಐಸಿಸಿಗೆ ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿತ್ತು. ಬಿಸಿಸಿಐ 161 ಕೋ.ರೂ. ಬಾಕಿ ಮೊತ್ತವನ್ನು ಪಾವತಿಸಬೇಕು ಅಥವಾ 2023ರ ವಿಶ್ವಕಪ್ ಆತಿಥ್ಯದ ಹಕ್ಕನ್ನು ಕಳೆದುಕೊಳ್ಳಲು ಸಿದ್ಧವಾಗಬೇಕೆಂದು ಐಸಿಸಿ ಖಡಕ್ ಸಂದೇಶ ರವಾನಿಸಿತ್ತು. ‘‘ವಿಶ್ವ ಕ್ರಿಕೆಟ್ಗಾಗಿ ತೆರಿಗೆ ವಿನಾಯಿತಿ ಪಡೆಯುವುದು ಅತ್ಯಂತ ಮುಖ್ಯವಾಗುತ್ತದೆ. ಏಕೆಂದರೆ ಐಸಿಸಿ ಆದಾಯದ ಪ್ರತಿ ಶೇಕಡಾಂಶವನ್ನು ಕ್ರಿಕೆಟ್ಗೆ ನೀಡಲಾಗುತ್ತದೆ. ಇದು ಕಡಿಮೆ ಆದಾಯವಿರುವ ವೆಸ್ಟ್ಇಂಡೀಸ್ನಂತಹ ದೇಶಗಳಿಗೆ ನೆರವಾಗುತ್ತದೆ. ಭಾರತ ಕೈಯಿಂದ ಮುಂಬರುವ 2 ಟೂರ್ನಿಗಳ ಆತಿಥ್ಯವನ್ನು ಕಸಿದುಕೊಳ್ಳುವ ಯೋಜನೆ ನಮ್ಮ ಮುಂದಿಲ್ಲ. ಅಂತಿಮವಾಗಿ ನಾವು ವಿನಾಯಿತಿ ಪಡೆಯುವ ದೃಢವಿಶ್ವಾಸದಲ್ಲಿದ್ದೇವೆ. ನಮಗೆ ಇನ್ನೂ ಸಾಕಷ್ಟು ಸಮಯವಿದೆ’’ ಎಂದು ರಿಚರ್ಡ್ ಸನ್ ಹೇಳಿದ್ದಾರೆ.