ಮುಂಬೈ ತಂಡದಲ್ಲಿ ಪೃಥ್ವಿ ಶಾ: ಮುಷ್ತಾಕ್ ಅಲಿ ಟ್ರೋಫಿ
ಮುಂಬೈ, ಫೆ.17: ಆಸ್ಟ್ರೇಲಿಯದಲ್ಲಿ ಮೂರು ತಿಂಗಳ ಹಿಂದೆ ಪಾದದ ನೋವಿಗೆ ಒಳಗಾಗಿದ್ದ ಯುವ ಕ್ರಿಕೆಟಿಗ ಪೃಥ್ವಿ ಶಾ ಆಟಕ್ಕೆ ವಾಪಸಾಗಿದ್ದಾರೆ. ಗಾಯದ ಕಾರಣ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಶಾ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಪ್ರಕಟಿಸಲಾದ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸುತ್ತಿದ್ದು, ಫೆ.21ರಿಂದ ಈ ಟೂರ್ನಿಯು ಇಂದೋರ್ನಲ್ಲಿ ಆರಂಭವಾಗಲಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ತಾನಾಡಿದ ಚೊಚ್ಚಲ ಟೆಸ್ಟ್ನಲ್ಲೇ ಶತಕ ಸಿಡಿಸಿ ಮಿಂಚಿದ್ದ ಶಾ, ನವೆಂಬರ್ನಲ್ಲಿ ಅಡಿಲೇಡ್ನಲ್ಲಿ ಆಸೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದರು. ಪರೀಕ್ಷೆ ನಡೆಸಿದ ವೇಳೆ ಪಾದದ ಮೂಳೆ ಮುರಿತ ಕಂಡುಬಂದಿದ್ದು, ಸದ್ಯ ಅವರು ವಿಶ್ರಾಂತಿಯಲ್ಲಿದ್ದರು.
ಗುರುವಾರ ಎನ್ಸಿಎನಲ್ಲಿ ಯೊಯೊ ಟೆಸ್ಟ್ಗೆ ಒಳಗಾಗಿದ್ದ ಶಾ ಅವರನ್ನು ಮುಂಬೈ ತಂಡದ ಆಯ್ಕೆ ಸಮಿತಿಯ ಅಜಿತ್ ಅಗರ್ಕರ್ ತಂಡದ ಆಯ್ಕೆಗೆ ಪರಿಗಣಿಸಿದ್ದಾರೆ.
ಮುಂಬೈ ತಂಡದಲ್ಲಿ ಶಾ ಅಲ್ಲದೆ ರಹಾನೆ ಹಾಗೂ ಶ್ರೇಯಸ್ ಅಯ್ಯರ್ ಸಿಡಿಯಲು ಸಜ್ಜಾಗಿದ್ದಾರೆ. ವೇಗಿಗಳಾದ ಧವಳ್ ಕುಲಕರ್ಣಿ, ಶಾರ್ದುಲ್ ಠಾಕೂರ್ ಮತ್ತು ತುಷಾರ್ ದೇಶಪಾಂಡೆ ತಂಡಕ್ಕೆ ಲಭ್ಯವಾಗಿದ್ದಾರೆ.