ಪಂದ್ಯವಾಡಲು ನಿರಾಕರಿಸಿದ ಮಿನರ್ವ ಫುಟ್ಬಾಲ್ ಕ್ಲಬ್
ಶ್ರೀನಗರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ
ಚಂಡಿಗಡ, ಫೆ.17: ಹಾಲಿ ಚಾಂಪಿಯನ್ ಮಿನರ್ವ ಫುಟ್ಬಾಲ್ ಕ್ಲಬ್ ತಂಡವು ಶ್ರೀನಗರದಲ್ಲಿ ನಡೆಯಬೇಕಿದ್ದ ರಿಯಲ್ ಕಾಶ್ಮೀರ ತಂಡದ ವಿರುದ್ಧದ ಐ-ಲೀಗ್ ಟೂರ್ನಿಯ ತನ್ನ ಪಂದ್ಯವನ್ನು ತಪ್ಪಿಸಿಕೊಂಡಿದೆ. ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಅಖಿಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ(ಎಐಎಫ್ಎಫ್) ಪಂದ್ಯವನ್ನು ಸ್ಥಳಾಂತರ ಮಾಡುವಂತೆ ಮಿನರ್ವ ತಂಡ ಕೇಳಿಕೊಂಡಿತ್ತು. ಆದರೆ ಈ ಮನವಿಯನ್ನು ಎಐಎಫ್ಎಫ್ ಪುರಸ್ಕರಿಸದ ಕಾರಣ ಈ ನಿರ್ಣಯ ತೆಗೆದುಕೊಂಡಿದೆ. ಉಭಯ ತಂಡಗಳ ಮಧ್ಯೆ ರವಿವಾರ ಪಂದ್ಯ ನಡೆಯಬೇಕಿತ್ತು.ಮಿನರ್ವ ತಂಡದ ವಿದೇಶಿ ಆಟಗಾರರಿಗೆ ಆಯಾ ದೇಶಗಳ ರಾಯಭಾರಿಗಳು ಪಂದ್ಯದಿಂದ ಹೊರಗುಳಿಯಲು ಸಲಹೆ ನೀಡಿದ್ದಾರೆ. ಈ ಕುರಿತು ಎಐಎಫ್ಎಫ್ಗೆ ಪತ್ರ ಬರೆದಿರುವ ಪಂಜಾಬ್ ಮೂಲದ ಕ್ಲಬ್, ‘‘ಪ್ರಕ್ಷುಬ್ಧ ಪರಿಸ್ಥಿತಿ ಇರುವ ಸ್ಥಳಕ್ಕೆ ಪಂದ್ಯವನ್ನಾಡಲು ತೆರಳುವ ಅಪಾಯವನ್ನು ಮೈಮೇಲೆಳೆದುಕೊಳ್ಳಲು ನಾವು ಬಯಸುವುದಿಲ್ಲ. ಈ ಕುರಿತು ವಿಷಾದವಿದೆ’’ ಎಂದು ತಿಳಿಸಿದೆ.
Next Story