ಹುತಾತ್ಮ ಯೋಧರ ಕುಟುಂಬಗಳಿಗೆ ಬಿಸಿಸಿಐ ಕನಿಷ್ಠ 5 ಕೋ.ರೂ. ನೀಡಲಿ
ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಮನವಿ
ಹೊಸದಿಲ್ಲಿ, ಫೆ.17: ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಬಿಸಿಸಿಐ ಕನಿಷ್ಠ 5.ಕೋ.ರೂ. ದಾನ ನೀಡಬೇಕೆಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ರವಿವಾರ ಬಿಸಿಸಿಐನ ಆಡಳಿತಗಾರರ ಸಮಿತಿಯ(ಸಿಒಎ)ಮುಖ್ಯಸ್ಥ ವಿನೋದ್ ರಾಯ್ಗೆ ಮನವಿ ಮಾಡಿದ್ದಾರೆ.
ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಹುತಾತ್ಮರ ಯೋಧರ ಮಕ್ಕಳು ಅಪೇಕ್ಷಿಸುವುದಾದರೆ ತನ್ನ ‘‘ಸೆಹ್ವಾಗ್ ಅಂತರ್ರಾಷ್ಟ್ರೀಯ ಶಾಲೆ’’ಯಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ್ದಾರೆ. ವಿದರ್ಭ ಕ್ರಿಕೆಟ್ ತಂಡವು ತಾನು ಗೆದ್ದ ಇರಾನಿ ಟ್ರೋಫಿಯ ನಗದನ್ನು ಯೋಧರ ಮಕ್ಕಳ ಕಲ್ಯಾಣಕ್ಕೆ ನೀಡುವುದಾಗಿ ಘೋಷಿಸಿದೆೆ.
‘‘ನಾವುದುಃಖಿತರಾಗಿದ್ದೇವೆ ಮತ್ತು ಪುಲ್ವಾಮ ದಾಳಿಯನ್ನು ಖಂಡಿಸಬೇಕು. ಹುತಾತ್ಮ ಯೋಧರ ಕುಟುಂಬಗಳಿಗೆ ನಮ್ಮ ಸಂತಾಪಗಳು ಸಲ್ಲುತ್ತವೆ. ಬಿಸಿಸಿಐ ಕನಿಷ್ಠ 5 ಕೋ.ರೂ.ವನ್ನು ಯೋಧರ ಕುಟುಂಬಗಳಿಗೆ ನೀಡಬೇಕೆಂದು ಆಡಳಿತಗಾರರ ಸಮಿತಿಗೆ ಮನವಿ ಮಾಡಿಕೊಳ್ಳುತ್ತೇನೆ’’ಎಂದು ಸಿಒಎ, ಕಚೇರಿ ಅಧಿಕಾರಿಗಳಿಗೆ ಹಾಗೂ ರಾಜ್ಯ ಘಟಕಗಳಿಗೆ ಬರೆದ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ರಾಜ್ಯ ಕ್ರಿಕೆಟ್ ಸಮಿತಿಗಳು ಹಾಗೂ ಐಪಿಎಲ್ ಫ್ರಾಂಚೈಸಿಗಳೂ ತಮಗೆ ಸಾಧ್ಯವಾದಷ್ಟು ಸಹಾಯಧನ ನೀಡಬೇಕೆಂದು ಖನ್ನಾ ಮನವಿ ಮಾಡಿಕೊಂಡಿದ್ದಾರೆ.