ಸರಕಾರದ ಸೂಚನೆಯ ತನಕ ಪಾಕ್ನೊಂದಿಗೆ ಕ್ರಿಕೆಟ್ ಪಂದ್ಯಗಳು ನಡೆಯಲ್ಲ: ಶುಕ್ಲಾ
ಪುಲ್ವಾಮ ಉಗ್ರ ದಾಳಿ ಹಿನ್ನೆಲೆ
ಹೊಸದಿಲ್ಲಿ, ಫೆ.18: ಸರಕಾರ ಸೂಚನೆ ನೀಡುವ ತನಕ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಗಳು ನಡೆಯುವುದಿಲ್ಲ ಎಂದು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಅಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
ಪುಲ್ವಾಮದಲ್ಲಿ ಗುರುವಾರ ಸಿಆರ್ಪಿಎಫ್ ಯೋಧರ ಮೇಲೆ ಉಗ್ರನ ಆತ್ಮಾಹುತಿ ದಾಳಿಯ ಹಿನ್ನೆಲೆಯಲ್ಲಿ ಶುಕ್ಲಾ ಈ ಹೇಳಿಕೆ ನೀಡಿದ್ದಾರೆ.
‘‘ಕ್ರೀಡೆ ಮೇಲಿನ ನಂಬಿಕೆ ಎಲ್ಲಕ್ಕಿಂತಲೂ ಮಿಗಿಲು. ಕೆಲವರು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದ್ದರೆ, ಅದು ಸಹಜವಾಗಿಯೇ ಕ್ರೀಡೆಗಳ ಮೇಲೆ ಪರಿಣಾಮಬೀರುತ್ತದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಸರಕಾರ ಸೂಚನೆ ನೀಡುವ ತನಕ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದಿಲ್ಲ’’ ಎಂದು ಸುದ್ದಿಗಾರರಿಗೆ ಶುಕ್ಲಾ ತಿಳಿಸಿದರು.
ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಆಡುವುದೇ? ಎಂದು ಶುಕ್ಲಾರನ್ನು ವಿಚಾರಿಸಿದಾಗ,‘‘ ಆ ಕುರಿತು ನಮಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ವಿಶ್ವಕಪ್ ಆರಂಭವಾಗಲು ಇನ್ನೂ ಕೆಲವು ಸಮಯವಿದೆ. ಏನಾಗುತ್ತದೆ ನಾವು ಕಾದು ನೋಡುತ್ತೇವೆ’’ ಎಂದರು.