ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು
ಹಣ ಪುಲ್ವಾಮ ಹುತಾತ್ಮರ ಕುಟುಂಬಗಳಿಗೆ: ಸಿಒಎ
ಹೊಸದಿಲ್ಲಿ,ಫೆ.22: ಈ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿರುವ ಕ್ರಿಕೆಟ್ ಆಡಳಿತಗಾರರ ಸಮಿತಿ (ಸಿಒಎ) ಅದಕ್ಕಾಗಿ ಮೀಸಲಿಟ್ಟ ಹಣವನ್ನು ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೀಡಲು ನಿರ್ಧರಿಸಿದೆ. ಪ್ರತಿವರ್ಷ ಟಿ20 ಪಂದ್ಯಾವಳಿ ಅಥವಾ ಐಪಿಎಲ್ನ ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿದ್ದು ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ತಾರಾ ಸಮೂಹವೇ ಈ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲ ಹಾಡು ಮತ್ತು ನೃತ್ಯದಿಂದ ಕ್ರಿಕೆಟ್ ಜಗತ್ತೇ ಬೆರಗುಗೊಳ್ಳುವಂತೆ ಮಾಡುತ್ತಿದೆ. ಆದರೆ ಈ ವರ್ಷ ಮಾರ್ಚ್ 23ರಿಂದ ಆರಂಭವಾಗಲಿರುವ 12ನೇ ಅವೃತ್ತಿಯ ಐಪಿಎಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನು ಹುತಾತ್ಮ ಸಿಆರ್ಪಿಎಫ್ ಯೋಧರ ಗೌರವಾರ್ಥ ರದ್ದುಗೊಳಿಸಲು ಸಿಒಎ ನಿರ್ಧರಿಸಿದೆ. ಈ ಕುರಿತು ಆಡಳಿತಗಾರರ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಶುಕ್ರವಾರ ನಡೆದ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.