ವಿಶ್ವಕಪ್: ವಿರಾಟ್ ಕೊಹ್ಲಿ ಪಡೆಗೆ ಅಗ್ನಿ ಪರೀಕ್ಷೆ
ಹೊಸದಿಲ್ಲಿ, ಮೇ 18: ಸ್ಥಿರ ಪ್ರದರ್ಶನದ ಮೂಲಕ ಈಗಾಗಲೇ ವಿಶ್ವದ ಗಮನ ಸೆಳೆದಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅತ್ಯಂತ ಮಹತ್ವದ್ದಾಗಿದೆ. ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೊಹ್ಲಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್ ಹಬ್ಬದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ವಿಶ್ವಕಪ್ ಗೆಲುವು ಕೊಹ್ಲಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲದು. ಏಳು ವಾರಗಳ ಕಾಲ ನಡೆಯುವ ವಿಶ್ವಕಪ್ ಪರ್ವದಲ್ಲಿ ಕೊಹ್ಲಿ ಮಹತ್ವದ ಪಾತ್ರವಹಿಸುವುದರಲ್ಲಿ ಅನುಮಾನವಿಲ್ಲ. ಅವರು ಟೂರ್ನಿಯ ವೇಳೆ ಏಕದಿನ ಕ್ರಿಕೆಟ್ನಲ್ಲಿ 11,000 ರನ್ ಪೂರೈಸುವ ಜೊತೆಗೆ ಈಗಾಗಲೇ ಗಳಿಸಿರುವ 41 ಶತಕಗಳಿಗೆ ಮತ್ತಷ್ಟು ಶತಕಗಳನ್ನು ಸೇರ್ಪಡೆಗೊಳಿಸುವ ನಿರೀಕ್ಷೆಯಿದೆ. ಇಂಗ್ಲೆಂಡ್ನ ಪಿಚ್ ಚಪ್ಪಟೆಯಾಗಿದ್ದು ರನ್ ಹೊಳೆ ಹರಿಯುವ ಸಾಧ್ಯತೆಯಿದೆ. ಪಿಚ್ ಉಪ ನಾಯಕ ರೋಹಿತ್ ಶರ್ಮಾರಂತಹ ದಾಂಡಿಗರಿಗೆ ಹೇಳಿಮಾಡಿಸಿದಂತಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ರೋಹಿತ್ ವೃತ್ತಿಜೀವನದ ನಾಲ್ಕನೇ ದ್ವಿಶತಕ ಗಳಿಸಿದರೂ ಅಚ್ಚರಿಪಡಬೇಕಾಗಿಲ್ಲ.
ಐಸಿಸಿ ಟೂರ್ನಿಗಳಲ್ಲಿ ಶಿಖರ್ ಧವನ್ ಈ ತನಕ ತಪ್ಪು ಹೆಜ್ಜೆ ಇಟ್ಟಿಲ್ಲ. ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಬಳಿಕ ಧವನ್ ದಾಖಲೆ ಉತ್ತಮವಾಗಿಯೇ ಇದೆ. ಭಾರತದ ಅಗ್ರ ಮೂವರು ಆಟಗಾರರು ಹಲವು ಬಾರಿ ಅಮೋಘ ಪ್ರದರ್ಶನ ನೀಡಿದ ಹೊರತಾಗಿಯೂ ಬ್ಯಾಟಿಂಗ್ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ. ಅಂಬಟಿ ರಾಯುಡು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವುದು ಹಾಗೂ ತರ್ಕ-ವಿತರ್ಕದ ಮಧ್ಯೆ ರಿಷಭ್ ಪಂತ್ ವಿಶ್ವಕಪ್ ತಂಡದಿಂದ ಹೊರಗುಳಿದ ಬಳಿಕ ನಾಲ್ಕನೇ ಕ್ರಮಾಂಕ ಹೆಚ್ಚು ಚರ್ಚಾಸ್ಪದ ವಿಷಯವಾಗಿದೆ. ಒತ್ತಡದ ಸನ್ನಿವೇಶದಲ್ಲಿ ದಿನೇಶ್ ಕಾರ್ತಿಕ್ರ ಅನುಭವ ತಂಡಕ್ಕೆ ನೆರವಾಗಲಿದೆ ಎಂಬ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಹಾಗೂ ನಾಯಕ ಕೊಹ್ಲಿಯ ವಿವರಣೆ ಸಾಕಷ್ಟು ಸಮರ್ಥನೀಯ ಕಾರಣವಲ್ಲ. ಬಾಂಗ್ಲಾದೇಶ ವಿರುದ್ಧ ನಿದಾಹಸ್ ಟಿ-20 ಫೈನಲ್ನಲ್ಲಿ 8 ಎಸೆತಗಳಲ್ಲಿ 29 ರನ್ ಗಳಿಸಿರುವುದು 14 ವರ್ಷಗಳ ಕಾರ್ತಿಕ್ ವೃತ್ತಿಜೀವನದಲ್ಲಿ ಸ್ಮರಣೀಯ ಕ್ಷಣವಾಗಿದೆ.
ಬಹುಪಯೋಗಿ ಕ್ರಿಕೆಟಿಗ ಎಂದು ಪ್ರಸಾದ್ರಿಂದ ಬಣ್ಣಿಸಲ್ಪಟ್ಟಿರುವ ವಿಜಯ ಶಂಕರ್ ಹಾಗೂ ಸ್ಪೆಷಲಿಸ್ಟ್ ಆರಂಭಿಕ ಕೆ.ಎಲ್. ರಾಹುಲ್ 4ನೇ ಕ್ರಮಾಂಕದಲ್ಲಿ ಆಡುವ ಸ್ಪರ್ಧೆಯಲ್ಲಿದ್ದಾರೆ.
ಎಂ.ಎಸ್. ಧೋನಿ ಕೊನೆಯ ಬಾರಿ ವಿಶ್ವಕಪ್ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಐಪಿಎಲ್ನಲ್ಲಿ ಡೆತ್ ಓವರ್ಗಳಲ್ಲಿ ಧೋನಿ ಭಾರತದ ಯುವ ಬೌಲರ್ರನ್ನು ಗುರಿಯಾಗಿಸಿ ಆಡಿದ್ದರು. ಆದರೆ, ಕಾಗಿಸೊ ರಬಾಡ, ಪ್ಯಾಟ್ ಕಮಿನ್ಸ್ ಅಥವಾ ಮುಹಮ್ಮದ್ ಆಮಿರ್ರಂತಹ ಬೌಲರ್ಗಳ ಎದುರು ದಿಟ್ಟ ಪ್ರದರ್ಶನ ನೀಡಬಲ್ಲರೇ ಎಂದು ಕಾದುನೋಡಬೇಕಾಗಿದೆ.
ಆರನೇ ಕ್ರಮಾಂಕದ ಆಟಗಾರ ಕೇದಾರ್ ಜಾಧವ್ ಇದೀಗ ಫಿಜಿಯೋ ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು, ವಿಶ್ವಕಪ್ಗೆ ತೆರಳುವುದು ಖಚಿತವಾಗಿದೆ. ಐಪಿಎಲ್ನಲ್ಲಿ ಚೆನ್ನೈ ಪರ 14 ಪಂದ್ಯಗಳಲ್ಲಿ ಆಡಿದ್ದ ಜಾಧವ್ ಅವರು ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹಿರ್ ಸ್ಪಿನ್ ಮೋಡಿಯ ಮುಂದೆ ಮಂಕಾಗಿದ್ದರು.
7ನೇ ಕ್ರಮಾಂಕದಲ್ಲಿ ಆಡಲಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಇನಿಂಗ್ಸ್ ಅಂತ್ಯದಲ್ಲಿ ಸಿಕ್ಸರ್ ಸಿಡಿಸಿ ಪಂದ್ಯದ ಚಿತ್ರಣ ಬದಲಿಸುವ ತಾಕತ್ತು ಪಾಂಡ್ಯಗಿದೆ.
ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಆಯ್ಕೆಗಾರರು ಕಳೆದ ಎರಡು ವರ್ಷಗಳಿಂದ ಅವಳಿ ಸ್ಪಿನ್ನರ್ಗಳಾದ ಕುಲದೀಪ ಯಾದವ್ ಹಾಗೂ ಯಜುವೇಂದ್ರ ಚಹಾಲ್ರತ್ತ ಹೆಚ್ಚು ಗಮನ ಹರಿಸಿದ್ದಾರೆ.
ವಿಶ್ವಕಪ್ಗೆ ತೆರಳಲು ಸಜ್ಜಾಗಿರುವ ಕುಲದೀಪ್ ಕಳಪೆ ಫಾರ್ಮ್ನಿಂದಾಗಿ ಐಪಿಎಲ್ನಲ್ಲಿ ಅಂತಿಮ-11ರ ಬಳಗದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದರು. ಜಸ್ಪ್ರೀತ್ ಬುಮ್ರಾ ಭಾರತದ ಓರ್ವ ಮ್ಯಾಚ್ ವಿನ್ನರ್ ಆಗಿದ್ದು, ಅವರಿಗೆ ಡೆತ್ ಓವರ್ನಲ್ಲಿ ಯಾರ್ಕರ್ಗಳ ಮೂಲಕ ಎದುರಾಳಿಯನ್ನು ಕಂಗೆಡಿಸುವ ಸಾಮರ್ಥ್ಯವಿದೆ. ಮುಹಮ್ಮದ್ ಶಮಿ ಸ್ವಿಂಗ್ ಬೌಲಿಂಗ್ನ ಮೂಲಕ ತಂಡಕ್ಕೆ ನೆರವಾಗಬಲ್ಲರು. ಭಾರತ 9 ಲೀಗ್ ಪಂದ್ಯಗಳ ಪೈಕಿ ಆರರಲ್ಲಿ ಜಯ ಸಾಧಿಸಿದರೆ ಸೆಮಿ ಫೈನಲ್ಗೆ ತೇರ್ಗಡೆಯಾಗಬಹುದು.