ಗ್ಲೌಸ್ ಮೇಲಿನ ಚಿಹ್ನೆ ತೆಗೆಯಲು ಐಸಿಸಿ ಸೂಚನೆ: ಧೋನಿ ಬೆಂಬಲಕ್ಕೆ ನಿಂತ ಬಿಸಿಸಿಐ
ಹೊಸದಿಲ್ಲಿ, ಜೂ.7: ವಿಶ್ವಕಪ್ ಪಂದ್ಯದ ವೇಳೆ ಎಂಎಸ್ ಧೋನಿ ವಿಕೆಟ್ಕೀಪಿಂಗ್ ಗ್ಲೌಸ್ನಲ್ಲಿ ಭಾರತೀಯ ಸೇನೆಯ ಚಿಹ್ನೆಯನ್ನು ಬಳಸಿಕೊಂಡಿರುವುದು ವಿವಾದದ ಸ್ವರೂಪ ಪಡೆದಿರುವಂತೆಯೇ ಬಿಸಿಸಿಐ ಆಡಳಿತ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಅಧ್ಯಕ್ಷ ವಿನೋದ್ ರಾಯ್ ಭಾರತದ ಮಾಜಿ ನಾಯಕನ ಬೆನ್ನಿಗೆ ನಿಂತಿದ್ದಾರೆ.
‘‘ಧೋನಿ ಕೀಪಿಂಗ್ ಗ್ಲೌಸ್ನಲ್ಲಿ ಬಳಸಿರುವ ಚಿಹ್ನೆ ಧಾರ್ಮಿಕ ಅಥವಾ ವಾಣಿಜ್ಯ ಜಾಹೀರಾತು ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಬಿಸಿಸಿಐ ಈಗಾಗಲೇ ಐಸಿಸಿಗೆ ಅಧಿಕೃತ ಪತ್ರವನ್ನು ಬರೆದು, ಚಿಹ್ನೆಯಿರುವ ಕೀಪಿಂಗ್ ಗ್ಲೌಸ್ ಬಳಸಲು ಅನುಮತಿ ನೀಡಬೇಕೆಂದು ಕೇಳಿಕೊಂಡಿದೆ. ಐಸಿಸಿ ನಿಯಮಾವಳಿ ಪ್ರಕಾರ ಆಟಗಾರರು ವಾಣಿಜ್ಯ ಜಾಹೀರಾತು, ಧಾರ್ಮಿಕ ಅಥವಾ ಮಿಲಿಟರಿ ಲಾಂಛನವನ್ನು ಬಳಸುವಂತಿಲ್ಲ. ಧೋನಿ ಬಳಸಿರುವ ಚಿಹ್ನೆ ವಾಣಿಜ್ಯ ಅಥವಾ ಧಾರ್ಮಿಕ ವಿಚಾರಕ್ಕೆ ಸಂಬಂಧಪಟ್ಟಿಲ್ಲ. ಬಲಿದಾನ ಪದ ಅರೆಸೇನಾ ಪಡೆಯ ಲಾಂಛನ. ಅದನ್ನು ಧೋನಿ ತನ್ನ ಗ್ಲೌಸ್ನಲ್ಲಿ ಬರೆದಿಲ್ಲ. ಧೋನಿ ಐಸಿಸಿ ನಿಯಮಾವಳಿಯನ್ನು ಉಲ್ಲಂಘಿಸಿಲ್ಲ’’ಎಂದು ವಿನೋದ್ ರಾಯ್ ಸಮರ್ಥಿಸಿಕೊಂಡರು.