ಸ್ಮಿತ್ ವಿರುದ್ಧ ಘೋಷಣೆ ಕೂಗಿದ ಭಾರತೀಯ ಅಭಿಮಾನಿಗಳಿಗೆ ಕೊಹ್ಲಿ ಹೇಳಿದ್ದೇನು ?
ನೈಜ ಕ್ರೀಡಾಸ್ಫೂರ್ತಿ ಮೆರೆದ ಭಾರತೀಯ ಕಪ್ತಾನ
ಲಂಡನ್, ಜೂ.8: ದಿ ಓವಲ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ವಿಶ್ವಕಪ್ನ ಹದಿನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ವಿರುದ್ಧ ಘೋಷಣೆ ಕೂಗಿದ ಭಾರತೀಯ ಅಭಿಮಾನಿಗಳನ್ನು ಟೀಮ್ ಇಂಡಿಯಾ ನಾಯಕ ಸಮಧಾನಪಡಿಸಿ ಹಾಗೇ ಮಾಡದಂತೆ ಸೂಚಿಸಿದ ಘಟನೆ ವರದಿಯಾಗಿದೆ.
ಇದರೊಂದಿಗೆ ನೈಜ ಕ್ರೀಡಾ ಸ್ಫೂರ್ತಿ ಮೆರೆದ ಟೀಮ್ ಇಂಡಿಯಾ ಕೊಹ್ಲಿ ಬಗ್ಗೆ ಸಾಮಾಜಿಕ ಮಾದ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತ ಈ ಪಂದ್ಯದಲ್ಲಿ 36 ರನ್ಗಳ ಜಯ ಗಳಿಸಿದೆ. ಭಾರತದ ಆಟಗಾರರು ಬ್ಯಾಟಿಂಗ್ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸ್ಮಿತ್ ಬೌಂಡರಿ ಲೈನ್ನ ಬಳಿ ಫೀಲ್ಡಿಂಗ್ ನಡೆಸುತ್ತಿದ್ದಾಗ ಅವರ ವಿರುದ್ಧ ಭಾರತ ತಂಡದ ಅಭಿಮಾನಿಗಳು ಘೋಷಣೆ ಕೂಗಿದರು. ಭಾರೀ ಸಂಖ್ಯೆಯಲ್ಲಿ ಭಾರತೀಯ ತಂಡದ ಅಭಿಮಾನಿಗಳು ಆಗಮಿಸಿ ತಂಡಕ್ಕೆ ಬೆಂಬಲ ನೀಡಿದ್ದರು. ಅಭಿಮಾನಿಗಳು ಸ್ಮಿತ್ ವಿರುದ್ಧ ಘೋಷಣೆ ಕೂಗುತ್ತಿದ್ದಾಗ ಕೊಹ್ಲಿಯು, ಸ್ಮಿತ್ ವಿರುದ್ಧ ಘೋಷಣೆ ಕೂಗಬೇಡಿ, ಅವರನ್ನು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಎಂದು ಮನವಿ ಮಾಡಿದರು.
ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಮತ್ತು ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಚೆಂಡು ವಿರೂಪಗೊಳಿಸಿದ ಆರೋಪದಲ್ಲಿ ನಿಷೇಧ ಎದುರಿಸಿ, ಈ ವಿವಾದದಿಂದ ಹೊರಬಂದಿದ್ದರು. ಅವರಿಗೆ ಗೌರವ ನೀಡುವಂತೆ ಆಸ್ಟ್ರೇಲಿಯದ ಕೋಚ್ ಜಸ್ಟೀನ್ ಲ್ಯಾಂಗರ್ ಹೇಳಿದ್ದರು.
— Utkarsh Bhatla (@UtkarshBhatla) June 9, 2019