ಸರ್ಫರಾಝ್ ಅಹ್ಮದ್ ಮೆದುಳಿಲ್ಲದ ನಾಯಕ
ಅಖ್ತರ್ ಆಕ್ರೋಶ
ಹೊಸದಿಲ್ಲಿ, ಜೂ.17: ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನದ ಸಾಮಾನ್ಯ ಆಟಗಾರರಿಂದ ಅಸಾಮಾನ್ಯ ಪ್ರದರ್ಶನ ನಿರೀಕ್ಷಿಸುವುದು ತಪ್ಪು. ಸರ್ಫರಾಝ್ರ ‘ನಾಯಕತ್ವದಲ್ಲಿ ಮೆದುಳಿಲ್ಲ’ ಎಂದು ಪಾಕ್ ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ಭಾರತ ವಿರುದ್ಧ ಪಾಕ್ ಸೋತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
‘‘2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತೀಯ ಕ್ರಿಕೆಟ್ ತಂಡ ಮಾಡಿರುವ ತಪ್ಪನ್ನೇ ರವಿವಾರ ಪಾಕಿಸ್ತಾನ ತಂಡ ಪುನರಾವರ್ತಿಸಿದೆ. ಪಾಕ್ ತನ್ನ ಕರ್ಮಕ್ಕೆ ಬಲಿಪಶುವಾಗಿದೆ. ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿರುವ ನಾಯಕ ಸರ್ಫರಾಝ್ ಅಹ್ಮದ್ ತಲೆಯಲ್ಲಿ ಮೆದುಳಿಲ್ಲ. ಅವರು ಹೇಗೆ ಇಷ್ಟೊಂದು ಬುದ್ದಿಯಿಲ್ಲದಂತೆ ವರ್ತಿಸಿದರೆಂದು ಅರ್ಥವಾಗುತ್ತಿಲ್ಲ. ಪಾಕ್ ತಂಡಕ್ಕೆ ದೊಡ್ಡ ಮೊತ್ತ ಬೆನ್ನಟ್ಟಲು ಸಾಧ್ಯವಿಲ್ಲ ಎಂಬ ವಿಚಾರ ಹೇಗೆ ಮರೆತಿದ್ದಾರೆ. ನಮ್ಮ ಶಕ್ತಿ ಬೌಲಿಂಗ್ ಆಗಿತ್ತು. ಸರ್ಫರಾಝ್ ಟಾಸ್ ಗೆದ್ದ ಸಂದರ್ಭದಲ್ಲಿ ಪಾಕ್ ಅರ್ಧ ಪಂದ್ಯ ಗೆದ್ದಿತ್ತು. ಆದರೆ, ಅವರು ಪಂದ್ಯದಲ್ಲಿ ಸೋಲಲು ಹೆಚ್ಚು ಪ್ರಯತ್ನ ಪಟ್ಟಿದ್ದಾರೆ’’ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
‘‘ಟಾಸ್ ಅತ್ಯಂತ ನಿರ್ಣಾಯಕ. ಪಾಕ್ ಮೊದಲು ಬ್ಯಾಟಿಂಗ್ ಮಾಡಿ 260 ರನ್ ಗಳಿಸಿದ್ದರೆ, ತನ್ನ ಉತ್ತಮ ಬೌಲಿಂಗ್ ಮೂಲಕ ಪಂದ್ಯವನ್ನು ಗೆಲ್ಲಬಹುದಿತ್ತು ಎಂದರು.