ಒಲಿಂಪಿಕ್ಸ್ಗೆ ಬಿಂದ್ರಾ ರಾಯಭಾರಿ
ಹೊಸದಿಲ್ಲಿ, ಎ.29: ಸ್ಟಾರ್ ಶೂಟರ್ ಅಭಿನವ್ ಬಿಂದ್ರಾ ಮುಂಬರುವ ಒಲಿಂಪಿಕ್ಸ್ನಲ್ಲಿ ಭಾರತದ ಸದ್ಭಾವನಾ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ನಟ ಸಲ್ಮಾನ್ ಖಾನ್ ಅವರೊಂದಿಗೆ ಸೇರ್ಪಡೆಯಾಗಿದ್ದಾರೆ.
ಸಲ್ಮಾನ್ ಖಾನ್ ಆಯ್ಕೆಯ ಸಂಬಂಧ ವಿವಾದ ತಲೆ ಎತ್ತಿರುವ ಹಿನ್ನೆಲೆಯಲ್ಲಿ ಭಾರತದ ಒಲಿಂಪಿಕ್ಸ್ ಸಂಸ್ಥೆ(ಐಒಎ) ಇದೀಗ ಬಿಂದ್ರಾರನ್ನೂ ರಾಯಭಾರಿ ಆಗಿ ಆಯ್ಕೆ ಮಾಡಿದ್ದಲ್ಲದೆ, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ರನ್ನು ರಾಯಭಾರಿ ಆಗುವಂತೆ ಆಹ್ವಾನ ನೀಡಿದೆ.
‘‘ಒಲಿಂಪಿಕ್ಸ್ಗೆ ನನ್ನನ್ನು ಸದ್ಬಾವನಾ ರಾಯಭಾರಿ ಆಗಿ ಆಯ್ಕೆ ಮಾಡಿರುವ ಐಒಎ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ನನಗೆ ಆಹ್ವಾನ ಪತ್ರವನ್ನು ಬರೆದಿದ್ದರು. ನನ್ನನ್ನು ಈ ಗೌರವಕ್ಕೆ ಆಯ್ಕೆ ಮಾಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಾನು ಗೌರವಪೂರ್ವಕವಾಗಿ ಈ ಹುದ್ದೆಯನ್ನು ಸ್ವೀಕರಿಸುವೆ’’ ಎಂದು ಬಿಂದ್ರಾ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ನಲ್ಲಿ ನಡೆಯಲಿರುವ ರಿಯೋ ಗೇಮ್ಸ್ನಲ್ಲಿ ಸ್ಪರ್ಧಿಸುತ್ತಿರುವ ರೈಫಲ್ ಶೂಟರ್ ಬಿಂದ್ರಾ, ಒಲಿಂಪಿಕ್ಸ್ಗೆ ತೆರಳಲಿರುವ ಎಲ್ಲ ಅಥ್ಲೀಟ್ಗಳಿಗೆ ಉತ್ತೇಜನ ನೀಡಲಿದ್ದೇನೆ ಎಂದು ಹೇಳಿದ್ದಾರೆ.