ವಿಂಡೀಸ್ ಎ ವಿರುದ್ಧ ಭಾರತಕ್ಕೆ ಎ ತಂಡಕ್ಕೆ ಭರ್ಜರಿ ಜಯ
ಆ್ಯಂಟಿಗುವಾ, ಜು.18: ನಾಯಕ ಮನೀಶ್ ಪಾಂಡೆ ಅವರ ಆಕರ್ಷಕ ಶತಕ ಹಾಗೂ ಕೃಣಾಲ್ ಪಾಂಡ್ಯ ಉರುಳಿಸಿದ 5 ವಿಕೆಟ್ ಗೊಂಚಲು ನೆರವಿನಿಂದ ಭಾರತ ಎ ತಂಡ ವೆಸ್ಟ್ ಇಂಡೀಸ್ ಎ ವಿರುದ್ಧ ಮೂರನೇ ಅನಧಿಕೃತ ಏಕದಿನ ಪಂದ್ಯದಲಿ 148 ರನ್ಗಳ ಭರ್ಜರಿ ಜಯ ದಾಖಲಿಸಿತು.
ಈ ಗೆಲುವಿನ ಮುಖಾಂತರ ಭಾರತ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.
ಬ್ಯಾಟಿಂಗ್ ಆಯ್ದುಕೊಂಡ ಭಾರತ ಎ ತಂಡ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 295 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಆತಿಥೇಯರು 34.2 ಓವರ್ಗಳಲ್ಲಿ 147 ರನ್ಗೆ ಆಲೌಟಾದರು.
ಭಾರತ ತಂಡ ತನ್ನ ಆರಂಭಿಕ ಆಟಗಾರ ಅನ್ಮೋಲ್ ಪ್ರೀತ್ ಸಿಂಗ್ರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಆಗ ಇನ್ನೋರ್ವ ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್(77, 81 ಎಸೆತ) ಹಾಗೂ ಒನ್ಡೌನ್ ಆಟಗಾರ ಶ್ರೇಯಸ್ ಅಯ್ಯರ್(17 ರನ್,69 ಎಸೆತ)ಎರಡನೇ ವಿಕೆಟ್ ಜೊತೆಯಾಟದಲ್ಲಿ ಉಪಯುಕ್ತ 109 ರನ್ ಸೇರಿಸಿದರು. ಗಿಲ್ ಔಟಾದ ಬಳಿಕ ಕ್ರೀಸ್ ಆಕ್ರಮಿಸಿಕೊಂಡ ಪಾಂಡೆ ಕೇವಲ 87 ಎಸೆತಗಳಲ್ಲಿ 100 ರನ್ ಗಳಿಸಿದರು.ಹನುಮ ವಿಹಾರಿ(29) ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 110 ರನ್ ಸೇರಿಸಿದರು.
ಗೆಲ್ಲಲು 296 ರನ್ ಚೇಸಿಂಗ್ಗೆ ತೊಡಗಿದ ಆತಿಥೇಯ ತಂಡ ಪರ ಮೊದಲ ವಿಕೆಟ್ ಜೊತೆಯಾಟದಲ್ಲಿ 51 ರನ್ ಗಳಿಸಿದ ಜಾನ್ ಕ್ಯಾಂಪ್ಬೆಲ್(21) ಹಾಗೂ ಸುನೀಲ್ ಅಂಬ್ರಿಸ್(30)ಸಾಧಾರಣ ಆರಂಭ ಒದಗಿಸಿದರು. 25 ರನ್ಗೆ 5 ವಿಕೆಟ್ ಗೊಂಚಲು ಪಡೆದ ಕೃಣಾಲ್, ವಿಂಡೀಸ್ ಎ ತಂಡವನ್ನು 150 ರೊಳಗೆ ನಿಯಂತ್ರಿಸಿದರು. ಕೆಳ ಕ್ರಮಾಂಕದಲ್ಲಿ ಕೀಮೊ ಪಾಲ್(34)ಒಂದಷ್ಟು ಪ್ರತಿರೋಧ ಒಡ್ಡಿದರೂ ಅಂತಿಮವಾಗಿ ಭಾರತ ಸುಲಭ ಜಯ ದಾಖಲಿಸಿತು.
ಭಾರತ ಎ ತಂಡ ಜು.11ರಂದು ಕೂಲಿಡ್ಜ್ ಹಾಗೂ ಜು.14 ರಂದು ನಾರ್ತ್ ಸೌಂಡ್ನಲ್ಲಿ ನಡೆದಿದ್ದ ಎರಡು ಪಂದ್ಯಗಳಲ್ಲಿ ತಲಾ 65 ರನ್ ಅಂತರದ ಜಯ ದಾಖಲಿಸಿತ್ತು. ನಾಲ್ಕನೇ ಹಾಗೂ 5ನೇ ಏಕದಿನ ಪಂದ್ಯಗಳು ಶುಕ್ರವಾರ ಹಾಗೂ ರವಿವಾರ ನಡೆಯಲಿದೆ.