ಮೊದಲ ಬಾರಿ ರಾಜಸ್ಥಾನದ ಮೂವರು ಆಟಗಾರರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ
ಜೈಪುರ, ಜು.22: ರಾಜಸ್ಥಾನ ರಾಜ್ಯ ಕ್ರಿಕೆಟ್ನಿಂದ ಇದೇ ಮೊದಲ ಬಾರಿ ಮೂವರು ಆಟಗಾರರು ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ. ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್, ಬಲಗೈ ವೇಗದ ಬೌಲರ್ ದೀಪಕ್ ಚಹಾರ್ ಹಾಗೂ ಸ್ಪಿನ್ನರ್ ರಾಹುಲ್ ಚಹಾರ್ ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ರವಾಸಕ್ಕೆ ಟಿ-20 ಸರಣಿಗಾಗಿ ರವಿವಾರ ಪ್ರಕಟಿಸಿರುವ 15 ಸದಸ್ಯರ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ರಾಜಸ್ಥಾನ ರಾಜ್ಯ ಕ್ರಿಕೆಟ್ ಮಂಡಳಿಯ ಮೇಲೆ ವಿಧಿಸಿರುವ ಅಮಾನತನ್ನು ಮುಂದುವರಿಸಲು ಬಿಸಿಸಿಐ ನಿರ್ಧರಿಸುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ. ‘‘ನನಗೆ ಅವಕಾಶ ಲಭಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಟೀಮ್ ಇಂಡಿಯಾದಲ್ಲಿ ನನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಇದು ದೀರ್ಘಾವಧಿಯ ಅವಕಾಶವಾಗಿದೆ’’ ಎಂದು ಖಲೀಲ್ ಅಹ್ಮದ್ ಹೇಳಿದ್ದಾರೆ. ಅಹ್ಮದ್ ಪ್ರಸ್ತುತ ಭಾರತ ಎ ತಂಡದೊಂದಿಗೆ ವೆಸ್ಟ್ಇಂಡೀಸ್ ಪ್ರವಾಸ ಕೈಗೊಂಡಿದ್ದಾರೆ. ಭಾರತ ಎ ತಂಡದಲ್ಲಿ ದೀಪಕ್ ಹಾಗೂ ರಾಹುಲ್ ಕೂಡ ಇದ್ದಾರೆ.
‘‘ನಾವು ಈ ದಿನಕ್ಕಾಗಿ ದೀರ್ಘ ಸಮಯದಿಂದ ಕಾಯುತ್ತಿದ್ದೆವು’’ ಎಂದು ದೀಪಕ್ ಸಹೋದರಿ ಮಾಲತಿ ಹೇಳಿದ್ದಾರೆ. ಆಗ್ರಾದಲ್ಲಿ ಕ್ರಿಕೆಟ್ ಅಕಾಡಮಿ ನಡೆಸುತ್ತಿರುವ ದೀಪಕ್ ತಂದೆ ರಾಹುಲ್ರನ್ನು ಕ್ರಿಕೆಟ್ಗೆ ಪರಿಚಯಿಸಿದ್ದರು.