ಇಂದಿನಿಂದ ವಿಂಡೀಸ್ ‘ಎ’- ಭಾರತ ‘ಎ’ ಅನಧಿಕೃತ ಟೆಸ್ಟ್
ನಾರ್ತ್ ಸೌಂಡ್(ಅಂಟಿಗುವಾ), ಜು.23: ಭಾರತ ‘ಎ’ ಮತ್ತು ವೆಸ್ಟ್ ಇಂಡೀಸ್ ‘ಎ’ ತಂಡಗಳ ನಡುವೆ ಅನಧಿಕೃತ ಟೆಸ್ಟ್ ಬುಧವಾರ ಆರಂಭಗೊಳ್ಳಲಿದೆ.
ಇಬ್ಬರು ಟೆಸ್ಟ್ ತಜ್ಞರಾದ ವೃದ್ಧಿಮಾನ್ ಸಹಾ ಮತ್ತು ಹನುಮ ವಿಹಾರಿ ಭಾರತ ‘ಎ’ ತಂಡದಲ್ಲಿ ಸೇರಿಕೊಂಡಿದ್ದಾರೆ. ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಯಾರಿಗೆ ಇದು ಅನುಕೂಲವಾಗಲಿದೆ.
34ರ ಹರೆಯದ ವೃದ್ಧಿಮಾನ್ ಸಹಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ. ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಈಗಾಗಲೇ ತಂಡದಲ್ಲಿರುವ ಹಿನ್ನೆಲೆಯಲ್ಲಿ ಸಹಾಗೆ ಮುಂದಿನ ದಾರಿ ಸುಗಮವಾಗಿಲ್ಲ.
ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಬಳಿಕ ತಂಡದಲ್ಲಿ ಖಾಲಿಯಾದ ವಿಕೆಟ್ ಕೀಪರ್ ಹುದ್ದೆಯನ್ನು ಸಹಾ ತುಂಬಿದ್ದರು. ಆದರೆ ಅವರು ಕಳೆದ ಐಪಿಎಲ್ ಆವೃತ್ತಿಯ ವೇಳೆ ಗಾಯಗೊಂಡಿದ್ದರು. ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧ ಟೆಸ್ಟ್ಗಳಲ್ಲಿ ಶತಕ ಬಾರಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. 9 ಟೆಸ್ ್ಟ ಗಳಲ್ಲಿ 2 ಶತಕ ಮತ್ತು 2 ಅರ್ಧಶತಕ ಗಳಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಗಳಲ್ಲಿ ತಲಾ 92 ರನ್ ಗಳಿಸಿ ಶತಕ ವಂಚಿತಗೊಂಡಿದ್ದರು. ಹನುಮ ವಿಹಾರಿ ಟೆಸ್ಟ್ ತಂಡದಲ್ಲಿ ಮಧ್ಯಮ ಸರದಿಯಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಅವರು ಆಡಿರುವ 4 ಟೆಸ್ಟ್ಗಳಲ್ಲಿ 1 ಅರ್ಧಶತಕ ದಾಖಲಿಸಿದ್ದಾರೆ.
►ಭಾರತ ‘ಎ’ ತಂಡ
ಶ್ರೇಯಸ್ ಅಯ್ಯರ್(ನಾಯಕ), ಪಿ.ಕೆ. ಪಾಂಚಾಲ್, ಎ.ಆರ್. ಈಶ್ವರನ್, ಶುಭ್ಮನ್ ಗಿಲ್, ಹನುಮ ವಿಹಾರಿ, ಶಿವಮ್ ದುಬೆ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಕೆ.ಎಸ್.ಭರತ್(ವಿಕೆಟ್ ಕೀಪರ್), ಕೆ.ಗೌತಮ್, ಎಸ್.ನದೀಮ್, ಮಾಯಾಂಕ್ ಮಾರ್ಕಂಡೆ, ನವ್ದೀಪ್ ಸೈನಿ, ಮುಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಆವೇಶ್ ಖಾನ್.