ಮಾಲಿಂಗರಿಗೆ ವಿದಾಯದ ಸರಣಿ
ಇಂದು ಬಾಂಗ್ಲಾ -ಶ್ರೀಲಂಕಾ ಏಕದಿನ ಪಂದ್ಯ
ಕೊಲಂಬೊ, ಜು.25: ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ಮೂರು ಪಂದ್ಯಗಳ ಏಕದಿನ ಸರಣಿ ಶುಕ್ರವಾರ ಆರಂಭಗೊಳ್ಳಲಿದ್ದು, ಇದು ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗರಿಗೆ ವಿದಾಯದ ಸರಣಿಯಾಗಿದೆ.
ಮಾಲಿಂಗ ಶ್ರೀಲಂಕಾದ ಪರ ಏಕದಿನ ಕ್ರಿಕೆಟ್ನಲ್ಲಿ ಮೂರನೇ ಗರಿಷ್ಠ ವಿಕೆಟ್ ಪಡೆದಿರುವ ಬೌಲರ್. 225 ಏಕದಿನ ಪಂದ್ಯಗಳಲ್ಲಿ ಅವರು 335 ವಿಕೆಟ್ ಪಡೆದಿದ್ದಾರೆ. ಚಮಿಂಡ ವಾಸ್ 399, ಮುತ್ತಯ್ಯ ಮುರಳೀಧರನ್ 523 ವಿಕೆಟ್ಗಳನ್ನು ಪಡೆದಿದ್ದಾರೆ. ಅನಿಲ್ ಕುಂಬ್ಳೆ ದಾಖಲೆ ಮುರಿಯಲು ಮಾಲಿಂಗ ಇನ್ನು 3 ವಿಕೆಟ್ಗಳನ್ನು ಗಳಿಸಬೇಕಾಗಿದೆ. ಮಾಲಿಂಗ 9ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದ ಸುಧಾರಣೆಯ ಕಡೆಗೆ ಗಮನ ಹರಿಸಬೇಕಾಗಿದೆ. ವಿಶ್ವಕಪ್ನಲ್ಲಿ ಈ ಮೂರು ವಿಭಾಗಗಳಲ್ಲಿ ಶ್ರೀಲಂಕಾ ವೈಫಲ್ಯ ಅನುಭವಿಸಿ ಸೆಮಿಫೈನಲ್ಗೇರುವಲ್ಲಿ ಎಡವಿತ್ತು.
ಕುಸಾಲ್ ಪೆರೆರಾ, ಆವಿಷ್ಕಾ ಫೆರ್ನಾಂಡೊ, ಕುಸಾಲ್ ಫೆರ್ನಾಂಡೊ ಮತ್ತು ಆ್ಯಂಜೆಲೊ ಮ್ಯಾಥ್ಯೂಸ್ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿದೆ.
ವಿಶ್ವಕಪ್ನಲ್ಲಿ ದೂರವಾಗಿದ್ದ ನಿರೋಶನ್ ದಿಕ್ವೆಲ್ಲಾ, ಲಹಿರು ತಿರಿಮನ್ನೆ, ಅಖಿಲಾ ಧನಂಜಯ ಮತ್ತು ಲಕ್ಷಣ್ ಸಂಡಕನ್ ವಿಶ್ವಕಪ್ನಲ್ಲಿ ಆಡಿರಲಿಲ್ಲ. ಅವರು ತಂಡದ ಸೇವೆಗೆ ವಾಪಸಾಗಲಿದ್ದಾರೆ.
ಮಿಲಿಂದ ಸಿರಿವರ್ದನಾ, ಜೆಫ್ರೆ ವಾಂಡೆರ್ಸೆ , ಸುರಂಗ ಲಕ್ಮಲ್ ಮತ್ತು ಜೀವನ್ ಮೆಂಡಿಸ್ ಸರಣಿಯಲ್ಲಿ ಆಡುತ್ತಿಲ್ಲ.ದಿನೇಶ್ ಚಾಂಡಿಮಾಲ್ರನ್ನು ತಂಡದಿಂದ ಕೈ ಬಿಡಲಾಗಿದೆ. ನುಮಾನ್ ಪ್ರದೀಪ್ ಅವರು ಚಿಕನ್ಪೊಕ್ಸ್ ನಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಇಂದು ಬಾಂಗ್ಲಾ -ಶ್ರೀಲಂಕಾ ಏಕದಿನ ಪಂದ್ಯ